ಕೊಪ್ಪಳ: ಆಗಸ್ಟ್ 07 : 2800 ಕ್ಯುಸೆಕ್ ನೀರು ಹರಿಯುವ ಸಾಮರ್ಥ್ಯದ ತುಂಗಭದ್ರಾ ಎಡದಂಡೆ ಮೈಲಾಪುರ ಬಳಿಯ 46ನೆ ಮೈಲು ಸೈಡ್ ಲೈನಿಂಗ್ ಕಾಲುವೆ ಕುಸಿತ ಕಾಮಗಾರಿಯನ್ನು ಆಗಸ್ಟ್ 9ರೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರಾದ ಶಿವರಾಜ ತಂಗಡಗಿ ಅವರು ಗಡುವು ವಿದಿಸಿದರು.
ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಅವರೊಂದಿಗೆ ಮೈಲಾಪುರ ಗ್ರಾಮದ ಹತ್ತಿರದಲ್ಲಿ ಕಾಲುವೆ ಕುಸಿತದ ಘಟನಾ ಸ್ಥಳಕ್ಕೆ ಆಗಸ್ಟ್ 7ರಂದು ಭೇಟಿ ನೀಡಿ ಕಾಲುವೆ ವೀಕ್ಷಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಮೈಲಾಪುರ ಹತ್ತಿರದ 
ಕಾಲುವೆ ದುರಸ್ತಿ ಕಾರ್ಯ ದಿನದ 24 ಗಂಟೆಯೂ ನಡೆಯಬೇಕು. ಕಾಲುವೆ ದುರಸ್ತಿ ಅವಧಿವರೆಗೆ ಕಾಲುವೆ ಮೇಲಿನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿದಿಸಿ ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಎಡದಂಡೆ ಮುಖ್ಯ ಕಾಲುವೆಯ ಎಲ್ಲ ಕಡೆಗೂ ಸಂಚರಿಸಿ, ಕಾಲುವೆಗೆ ದಕ್ಕೆಯಾದ ಸ್ಥಳಗಳನ್ನು ಗುರುತಿಸಿ ಆಯಾ ಕಡೆಗಳಲ್ಲಿ ಕೂಡಲೇ ದುರಸ್ತಿ ಕಾರ್ಯವನ್ನು ಕಾಲುವೆಗೆ
ನೀರು ಹರಿಸುವ ಮೊದಲೇ ಪೂರ್ಣಗೊಳಿಸಬೇಕು ಎಂದು ಇದೆ ವೇಳೆ ಸಚಿವರು, ನೀರಾವರಿ ನಿಗಮದ ಅಭಿಯಂತರ ಮಲ್ಲಿಗವಾಡ ಅವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
*ಆ.11ನೇ ತಾರೀಖಿಗೆ ನೀರಾವರಿ ಸಲಹಾ ಸಮಿತಿ ಸಭೆ:* ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಟಿಬಿ ಡ್ಯಾಮಗೆ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಕಳೆದೆರಡು ದಿನಗಳ ಹಿಂದೆ 10 ಟಿಎಂಸಿ ನೀರು ಬಂದಿದೆ. ಆಗಸ್ಟ್ 6ರಂದು ಒಂದೇ ದಿನ 4 ಟಿಎಂಸಿ ನೀರು ಹರಿದು ಬಂದಿದೆ. ಸದ್ಯ ತುಂಗಭದ್ರಾ ಜಲಾಶಯದಲ್ಲಿ 68 ಟಿಎಂಸಿ ನೀರು ಲಭ್ಯವಿದೆ. ನೀರಾವರಿ ಸಲಹಾ ಸಮಿತಿ ಸಭೆಯನ್ನು ಆಗಸ್ಟ್ 11ನೇ ತಾರೀಖಿಗೆ ನಡೆಸಲು ಯೋಜಿಸಲಾಗಿದೆ. ರೈತರ ಕೋರಿಕೆಯಂತೆ ಕಾಲುವೆಗೆ ನೀರು ಬಿಡುವ ಬಗ್ಗೆ ನಿರ್ಧರಿಸಲು ಸಭೆಯಲ್ಲಿ ಎಲ್ಲ ಸಂಸದರು, ಶಾಸಕರು ಮತ್ತು ವಿರೋಧ ಪಕ್ಷದ ಪ್ರಮುಖರು, ರೈತರು, ನೀರಾವರಿ ತಜ್ಞರಿಂದ ಸಲಹೆ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ, ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ, ನೀರಾವರಿ ನಿಗಮದ ಅಭಿಯಂತರ ಶ್ರೀನಿವಾಸ ಮಲ್ಲಿಗವಾಡ, ಡಿವೈಎಸ್ಪಿ ನ್ಯಾಮಗೌಡ ಇದ್ದರು.
