ಕೊಪ್ಪಳ: ರಾಮಾಯಣದ ಕಿಷ್ಕಂಧಾ ಪ್ರದೇಶ. ಹನುಮನ ಜನ್ಮ ಸ್ಥಳವಾಗಿರುವ ಅಂಜನಾದ್ರಿ ಅಭಿವೃದ್ದಿಗೆ ಸರಕಾರ 100 ಕೋಟಿ ರೂಪಾಯಿ ನೀಡಿ ಅಂಜನಾದ್ರಿಯನ್ನು ವಿಶ್ವಮಟ್ಟದಲ್ಲಿ ಅಭಿವೃದ್ದಿ ಪಡಿಸುವ ಯೋಜನೆ ಸಿದ್ದವಾಗುತ್ತಿದೆ.
ಅಂಜನಾದ್ರಿಯಲ್ಲಿ ಶುರುವಾಯ್ತು ಅಭಿವೃದ್ಧಿ ಪರ್ವ
ಆ ಜಲಧಿಯನು ಜಿಗಿದ ಹನುಮನುದಿಸಿದ ನಾಡು ಎಂದು ಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯು ಶ್ರೀರಾಮ ಭಂಟ ಹನುಮನ ಜನ್ಮ ಸ್ಥಳ, ಹನುಮನ ಜನ್ಮ ಸ್ಥಳ ಅಂಜನಾದ್ರಿಯನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ರಾಜ್ಯ ಸರಕಾರವು ಈ ಬಾರಿಯ ಬಜೆಟ್ ನಲ್ಲಿ 100 ಕೋಟಿ ರೂಪಾಯಿ ನೀಡಲಾಗುವುದು ಎಂದು ಘೋಷಿಸಿದೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ದಿ ಪಡಿಸುವುದಾಗಿ ಹೇಳಿದ್ದಾರೆ. ಇದರಿಂದಾಗಿ ಈಗ ಅಂಜನಾದ್ರಿಯಲ್ಲಿ ಅಭಿವೃದ್ದಿ ಪರ್ವ ಆರಂಭವಾಗಲಿದೆ.
ದೇಗುಲಕ್ಕಾಗಿ 1 ಸಾವಿರ ಎಕರೆ ಭೂಮಿ
ಈ ಮಧ್ಯೆ ಜಿಲ್ಲಾಡಳಿತವು ಅಂಜನಾದ್ರಿ ದೇವಸ್ಥಾನ ಹಾಗು ಅದರ ಸುತ್ತಲಿನ ಪ್ರದೇಶದಲ್ಲಿ ಯಾವ ಯಾವ ಅಭಿವೃದ್ದಿ ಕಾಮಗಾರಿ ಮಾಡಬೇಕು. ಅವಶ್ಯವಿದ್ದರೆ ಎಷ್ಟು ಭೂಮಿ ಸ್ವಾದೀನ ಪಡಿಸಿಕೊಳ್ಳಬೇಕೆಂಬುವುದನ್ನು ಸರ್ವೆ ಮಾಡಲಾಗಿದೆ, ಈ ಪ್ರಕಾರ ಅಂಜನಾದ್ರಿ ಸುತ್ತಲು ಸುಮಾರು 1000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ ಎಂಬ ಮಾಹಿತಿ ಈಗ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸುತ್ತಮುತ್ತಲ ರೈತರಿಗೆ ಶುರುವಾಯ್ತು ಆತಂಕ
ಇದರಿಂದ ಆತಂಕಗೊಂಡ ರೈತರು ಅಂಜನಾದ್ರಿ ಅಭಿವೃದ್ದಿ ನೆಪದಲ್ಲಿ ಸಣ್ಣ, ಅತಿ ಸಣ್ಣ ರೈತರನ್ನು ಒಕ್ಕಲೆಬ್ಬಿಸಬೇಡಿ ಬಾಳೆ, ಭತ್ತ ಬೆಳೆಯು ಕೃಷಿ ಭೂಮಿಯನ್ನು ನಂಬಿಕೊಂಡು ಬದುಕುತ್ತಿದ್ದೇವೆ, ಇದೇ ಭೂಮಿಯಿಂದ ಮಕ್ಕಳ ಓದು, ಜೀವನ ನಿರ್ವಹಣೆ ಮಾಡುತ್ತೇವೆ. ಇಂಥ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಬೀದಿ ಪಾಲು ಮಾಡಬೇಡಿ ಎಂದು ರೈತರು ಆಗ್ರಹಿಸಿದ್ದಾರೆ. ಅವಶ್ಯವಿರುವಷ್ಟು ಮಾತ್ರ ಭೂಮಿ ತೆಗೆದುಕೊಳ್ಳಿ ಎಂದು ಸಹ ಆಗ್ರಹಿಸಿದ್ದಾರೆ.
ಈ ಬಗ್ಗೆ ಕೊಪ್ಪಳ ಜಿಲ್ಲಾಧಿಕಾರಿ ಹೇಳುವುದೇನು?
ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಅಭಿವೃದ್ದಿ ಕಾರ್ಯಕ್ಕಾಗಿ ಭೂಮಿ ಸಮಿಕ್ಷೆ ಮಾಡಲಾಗಿದೆ,. ಅವಶ್ಯವಿರುವಲ್ಲಿ ಮಾತ್ರ ಭೂಮಿ ಖರೀದಿಸಲಾಗುವುದು. ಅಭಿವೃದ್ದಿ ಕಾರ್ಯಗಳನ್ನು ಮೊದಲು ಸರಕಾರ ಭೂಮಿಯನ್ನು ತೆಗೆದುಕೊಳ್ಳಲಾಗುವುದು. ಈ ಸಮಿಕ್ಷೆ ಮಾಡಿರುವುದು ಕೇವಲ ಪ್ರಾಥಮಿಕ ಸಮಿಕ್ಷೆ ಅಷ್ಟೆ ಸಮಿಕ್ಷೆ ಮಾಡಿದ ಎಲ್ಲಾ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ರಾಜ್ಯ ಸರಕಾರ ಅಂಜನಾದ್ರಿ ಅಭಿವೃದ್ದಿಗಾಗಿ 20 ಕೋಟಿ ರೂಪಾಯಿ ನೀಡಿದೆ. ಇಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ರೈತರ 13 ಎಕರೆ ಭೂಮಿ ಸ್ವಾದೀನಪಡಿಸಿಕೊಳ್ಳಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದಿಂದ ಇನ್ನೂ ಭೂಮಿ ಸ್ವಾದೀನಪಡಿಸಿಕೊಂಡಿಲ್ಲ.
ಈ ಮಧ್ಯೆ ಮತ್ತೆ 1000 ಎಕರೆ ಭೂಮಿ ಸ್ವಾದೀನಪಡಿಸಿಕೊಳ್ಳಲು ಜಿಲ್ಲಾಡಳಿತವು ಮುಂದಾಗಿದೆರೈತರ ಭೂಮಿ ಸ್ವಾದೀನಪಡಿಸಿಕೊಳ್ಳುವದನ್ನು ಕೈಬಿಡಬೇಕೆಂದು ರೈತರು ಆಗ್ರಹಿಸಿದ್ದಾರೆ.
