ಸತ್ಯ ದರ್ಶನ
ಹೊಸದಿಲ್ಲಿ : ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸೋಮವಾರ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ರಜನಿಕಾಂತ್ ಅವರಿಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೂಪರ್ಸ್ಟಾರ್, ‘ಜನರ ಪ್ರೀತಿ ಮತ್ತು ಬೆಂಬಲದಿಂದಾಗಿ ಭಾರತ ಸರಕಾರ ಈ ಪ್ರಶಸ್ತಿ ನನಗೆ ನೀಡಿದೆ.ಈ ಪ್ರಶಸ್ತಿಯನ್ನು ನನ್ನ ಮಾರ್ಗದರ್ಶಕ ಕೆ. ಬಾಲಚಂದರ್, ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಮತ್ತು ಅವರ ಬಸ್ ಚಾಲಕ-ಸ್ನೇಹಿತ ರಾಜ್ ಬಹದ್ದೂರ್,ನಿರ್ದೇಶಕರು, ನಿರ್ಮಾಪಕರು, ಥಿಯೇಟರ್ ಮಾಲೀಕರು, ತಂತ್ರಜ್ಞರು ಮತ್ತು ಅಭಿಮಾನಿಗಳಿಗೆ ಅರ್ಪಿಸಿದರು.
ರಜನಿ ಕಾಂತ್ ಅವರ ಅಳಿಯ ಧನುಷ್ ಅವರು ಸಮಾರಂಭದಲ್ಲಿ ಭಾಗವಹಿಸಿ ‘ಅಸುರನ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದದ್ದು ವಿಶೇಷವಾಗಿತ್ತು. ಸಮಾರಂಭದ ಬಳಿಕ ಪ್ರಶಸ್ತಿ ಪದಕಗಳನ್ನು ರಜನಿ ಕಾಂತ್ ಅವರ ಪುತ್ರಿ ಸೌಂದರ್ಯ ಅವರು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ರಜನಿಕಾಂತ್ ಅವರ ಪತ್ನಿ ಲತಾ ಮತ್ತು ಧನುಷ್ ಅವರ ಪತ್ನಿ ಐಶ್ವರ್ಯ ಕೂಡ ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಿಸಿದರು
