ಕೊಪ್ಪಳ :ಆಗಸ್ಟ್ 03 : ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಜ್ ಎಸ್ ತಂಗಡಗಿ ಅವರು ಆಗಸ್ಟ್ 3ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಮೂಲಕ 4ನೇ ಬಾರಿಗೆ ಸಚಿವರಾದ ದಾಖಲೆ ಬರೆದರು.
ಬೆಂಗಳೂರಿನ ಲೋಕಭವನ ಆವರಣದಲ್ಲಿನ ಗಾಜಿನಮನೆಯಲ್ಲಿ ಆಗಸ್ಟ್ 3ರಂದು ಸಂಜೆ ನಡೆದ ಸಚಿವರ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರು ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.
ಶಿವರಾಜ ತಂಗಡಗಿ ಅವರು ಈ ಹಿಂದೆ 2008, 2013 ಮತ್ತು 2023ರಲ್ಲಿ ಸಚಿವರಾಗಿದ್ದ ವೇಳೆಯಲ್ಲಿ ಕೃಷಿ ಮಾರುಕಟ್ಟೆ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಹಿನ್ನೆಲೆ: 10-06-1971ರಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ಜನಿಸಿರುವ ಶಿವರಾಜ ತಂಗಡಗಿ ಅವರು ಪ್ರಾಥಮಿಕ, ಪ್ರೌಢ ಹಾಗೂ ಪಿಯು ಮತ್ತು ಪದವಿ ಶಿಕ್ಷಣವನ್ನು ಇಳಕಲ್ನಲ್ಲಿ ಪೂರೈಸಿದ್ದಾರೆ. ಕಾಲೇಜು ದಿನಗಳಲ್ಲೇ ನಾಯಕತ್ವ ಗುಣಗಳನ್ನು ಹೊಂದಿ 25ನೇ ವಯಸ್ಸಿಗೆ ರಾಜಕೀಯ ಪ್ರವೇಶ ಮಾಡಿದರು. ಜನನಾಯಕರಾಗಿ ಮೊದಲಿಗೆ ಇಳಕಲ್ ಪುರಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಮುಂದೆ ಕನಕಗಿರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದರು. ಅದೇ ವೇಳೆ ಕ್ಯಾಬಿನೆಟ್ ಸಚಿವರಾದರು. ಮುಂದೆ 2013ರಲ್ಲಿ ಹಾಗೂ 2023ರಲ್ಲಿ ಸಹ ವಿಧಾನಸಭೆ ಪ್ರವೇಶಿಸಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
