ನರೇಗಲ್: ಸಾರ್ವಜನಿಕರು ಸರಿಯಾಗಿ ಸ್ಪಂದಿಸದೇ ಸರ್ಕಾರಿ ಕೆಲಸಗಳನ್ನು ವಿನಾಃಕಾರಣ ವಿಳಂಬ ಹಾಗೂ ಜನರಿಗೆ ತೊಂದರೆ ನೀಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಗದಗ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ ಬಿರಾದಾರ ಸೂಚಿಸಿದರು.
ನರೇಗಲ್ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಜಿಲ್ಲಾ ಲೋಕಾಯುಕ್ತ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ, ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
‘ಸಾರ್ವಜನಿಕರ ಅನಗತ್ಯ ವಿಳಂಬ ಅರ್ಜಿಗಳನ್ನು ಮಾಡದೇ ಶೀಘ್ರ ವಿಲೇವಾರಿ ಹಾಗೂ ಸೂಕ್ತ ಕಾರಣವಿಲ್ಲದೆ ಅರ್ಜಿಗಳನ್ನುತಿರಸ್ಕರಿಸದಂತೆ ಅಧಿಕಾರಿಗಳಿಗೆ ಸೂಚಿಸಿ, ಸಾರ್ವಜನಿಕರೊಂದಿಗೆ ತಾಳ್ಮೆ ಮತ್ತು ಸೌಜನ್ಯದಿಂದ ವರ್ತಿಸಬೇಕು’ ಎಂದರು.
‘ಕೃಷಿ ಇಲಾಖೆಯ ಯೋಜನೆಗಳು ಪ್ರತಿ ರೈತನಿಗೂ ತಲುಪಬೇಕು. ಹೆಸ್ಕಾಂವ್ಯಾಪ್ತಿಯಲ್ಲಿ ಬರುವ 20 ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆಯನ್ನು ಮಾಡಬೇಕು. ಜಾನುವಾರುಗಳಿಗೆ ಕಾಲಕಾಲಕ್ಕೆ ತಪಾಸಣೆ ನಡೆಸಬೇಕು’ ಎಂದು ಸಂಭದ್ದಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು.’ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರವೇಶಾತಿ ಮಾಹಿತಿ ಪಡೆದು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನಕೂಲವಾಗುವಂತೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರಿ ಕಾಲೇಜಿಗೆ ಸೂಕ್ತ ವಿದ್ಯುತ್ ಕಲ್ಪಿಸಬೇಕು. ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು’ ಎಂದು ಹೇಳಿದರು.
‘ನರೇಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ನೀರಿನ ಟ್ಯಾಂಕುಗಳು ಸೋರುತ್ತಿರುವ ಕುರಿತು ದೂರು ಬಂದಿದೆ. ಒಂದು ವಾರದಲ್ಲಿ ಸರಿ ಆಗಬೇಕು’ ಎಂದು ಲೋಕಾಯುಕ್ತರು ಮುಖ್ಯಾಧಿಕಾರಿಗೆ ತಿಳಿಸಿದರು.
ಈ ವೇಳೆ ಸಾರ್ವಜನಿಕರು ಲೋಕಾಯುಕ್ತರಿಗೆ ದೂರುಗಳನ್ನು ಸಲ್ಲಿಸಿದರು. ನರೇಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಬಿ. ನಿಡಶೇಶಿ, ವೈದ್ಯಾಧಿಕಾರಿ ಡಾ.ಎ.ಡಿ ಸಾಮುದ್ರಿ, ಉಪ ತಹಶೀಲ್ದಾರ್ ಎಸ್.ಜಿ.ದೊಡ್ಡಮನಿ, ತಾಲ್ಲೂಕು ಪಂಚಾಯಿತಿ ಇಒ ಬಡಿಗೇರ ಹಾಗೂ ಇಲಾಖೆಯ ಅಧಿಕಾರಿಗಳು ಇದ್ದರು.
ವರದಿಗಾರರು,
ಹುಚ್ಚೀರಪ್ಪ ವೀರಪ್ಪ ಈಟಿ
