ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ/ ವಿಶೇಷ ಗ್ರಾಮ ಸಭೆ
ಯೋಜನೆಗಳ ಯಶಸ್ವಿಗೆ ಜನರ ಸಹಭಾಗಿತ್ವ ಅವಶ್ಯಕ: ಅರವಿಂದ ಬಂಡಿ
ಗಜೇಂದ್ರಗಡ : ಸರ್ಕಾರದ ಪ್ರತಿಯೊಂದು ಯೋಜನೆಗಳು ಯಶಸ್ವಿಯಾಗಬೇಕಾದರೆ ಗ್ರಾಮದ ಸಾರ್ವಜನಿಕರ ಸಹಭಾಗಿತ್ವ ಬಹಳ ಅವಶ್ಯಕವಾಗಿರುತ್ತದೆ ಎಂದು ತಾ.ಪಂ. ಯೋಜನಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳಾದ ಅರವಿಂದ ಬಂಡಿ ಹೇಳಿದರು.
ತಾಲೂಕಿನ ರಾಮಾಪೂರು ಗ್ರಾಮದ ಆಂಜನೆ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಗ್ರಾಮ ಪಂಚಾಯತಿ ವತಿಯಿಂದ ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ವಿಶೇಷ ಗ್ರಾಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರದ ಯಾವುದೇ ಯೋಜನೆ ಸಂಪೂರ್ಣವಾಗಿ ಯಾಶಸ್ಚಿಯಾಗಲು ಜನರ ಸಹಕಾರ ಮುಖ್ಯವಾಗಿರುತ್ತದೆ. ಆನಿಟ್ಟಿನಲ್ಲಿ ಗ್ರಾಮದ ಜನರು ಪಂಚಾಯತಿಗೆ ಸಹಕಾರ ನೀಡಿ ಪ್ರತಿಯೊಂದು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಳೆದ ವರ್ಷ ಕ್ರಿಯಾ ಯೋಜನೆಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಕೈಗೊಂಡಿ ಗ್ರಾಮ ಅಭಿವೃದ್ಧಿ ಮಾಡಲಾಗಿದೆ. ಅದೇ ರೀತಿ ಈ ವರ್ಷವೂ ಕೂಡಾ ಜನರು ಸಹಕಾರ ನೀಡಬೇಕು. ವಿಬಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಕೂಲಿಕಾರರಿಗೆ ವರದಾನವಾಗಿದೆ. ಈ ಯೋಜನೆಯಲ್ಲಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಕೂಲಿಕಾರರಿಗೆ ಕೆಲಸ ಒದಗಿಸುವ ಯೋಜನೆಯಾಗಿದೆ ಎಂದರು.
ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ ಮಾತನಾಡಿ, ನರೇಗಾ ಬದಲಾಗಿ ಜುಲೈ 1 2026 ರಿಂದ ವಿಬಿ ಜಿ ರಾಮ್ ಜಿ ಯೋಜನೆ ಅಧಿಕೃತವಾಗಿ ಜಾರಿಯಾಗಿದೆ. ಈ ಯೋಜನೆಯಲ್ಲಿ ಕೂಲಿಕಾರರಿಗೆ ಒಂದು ಜಾಬ್ ಕಾರ್ಡ್ ಗೆ 100 ದಿನ ಬದಲಾಗಿ 125 ದಿನ ಕೆಲಸ ಹೆಚ್ಚಳ ಮಾಡಲಾಗಿದೆ. ಕೂಲಿ ಮೊತ್ತ 372 ಬದಲಾಗಿ 382 ರೂಪಾಯಿ ಹೆಚ್ಚಿಸಿದೆ. ಜೊತೆಗೆ ನರೇಗಾ ಯೋಜನೆಯಲ್ಲಿ 292 ಕಾಮಗಾರಿಗಳು ಇದ್ದವು ವಿಬಿ ಜಿರಾಮ್ ಜಿ ಯೋಜನೆಯಲ್ಲಿ 318 ಕಾಮಗಾರಿ ಅವಳವಡಿಕೆ ಮಾಡಲಾಗಿದೆ. ವಿಜಿ ಜಿ ರಾಮ್ ಜಿ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಯಿತು.
ಆ.15 ರಿಂದ ಸೆ. 15 ರವೆಗೆ ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಜಾಬ್ ಕಾರ್ಡ್ ಇಲ್ಲದವರಿಗೆ ಹೊಸ ಜಾಬ್ ಕಾರ್ಡ್ , ಜಾಬ್ ಕಾರ್ಡ್ ತಿದ್ದುಪಡಿ/ ನವೀಕರಣ, ಇಕೆವೈಸಿ ಅಪ್ಡೇಟ್ ಮಾಡಿಸಲು ಅವಕಾಶ ನೀಡಲಾಗಿದೆ. ಎಂದರು.
ಗಜೇಂದ್ರಗಡ ತಾಲೂಕು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ವಿಬಿ ಜಿ ರಾಮ್ ಜಿ ಕೆಲಸ ಕೊಡಲಾಗುತ್ತದೆ. ಕೂಲಿಕಾರರು ನಮೂನೆ 6 ತುಂಬಿ ಕೆಲಸ ಪಡೆದುಕೊಳ್ಳಬಹುದು ಎಂದು ತಿಳಿಸಲಾಯಿತು.
ಸಾಮಾಜಿಕ ಲೆಕ್ಕ ಪರಿಶೋಧನೆ ತಾಲೂಕು ಸಂಯೋಜಕರಾದ ವಿಜಯಮಾಹಾಂತೇಶ ಹಿರೇಮಠ ಅವರು 2025-26 ನೇ ಸಾಲಿನ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಸಾಮಾಜಿಕ ಲೆಕ್ಕ ಪರಿಶೋಧನೆ ವಿಷಯ ಮಂಡಿಸಿದರು.
ಪ್ರೌಢಶಾಲೆ ನೂತನ ಕಟ್ಟಡ ಅನುದಾನ ಮಂಜೂರು ಮಾಡಲು ಮನವಿ ಸಲ್ಲಿಸಲಾಗಿತ್ತು. ಪ್ರೌಢ ಶಾಲೆ ಜಾಗ ಗುರುತಿಸಲು ತಿಳಿಸಿದ್ದಾರೆ. ಹಾಗಾಗಿ ಗ್ರಾಮದ ಎರಡ್ಮೂರು ಜನರು ಜಾಗ (ಭೂ ದಾನ ) ಮಾಡಲು ಗ್ರಾಮ ಸಭೆ ಮುಂದಾದರು. ಗ್ರಾಮದ ಹಿರಿಯರು ಎಲ್ಲರೂ ಮೇಲಾಧಿಕಾರಿಗಳನ್ನು ಕರೆಸಿ ಸ್ಥಳ ಪರಿಶೀಲನೆ ಮಾಡಿಸಿ ಜಾಗ ಗುರುತು ಮಾಡೋಣ. ಅಧಿಕಾರಿಗಳು ಯಾವುದು ಗುರುತು ಮಾಡುತ್ತಾರೆ ಅದಕ್ಕೆ ಒಪ್ಪಿಕೊಳ್ಳೋಣ ಎಂದು ತಿಳಿಸಿದಾಗ ಎಲ್ಲಾ ಗ್ರಾಮಸ್ಥರು ಒಪ್ಪಿಕೊಂಡರು.
ಕಾರ್ಯದರ್ಶಿಗಳಾದ ಮಹೇಶ ಭಗವತಿ ಪ್ರಸಕ್ತ ವರ್ಷದ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅಳವಡಿಸಿರುವ ಕಾಮಗಾರಿಗಳನ್ನು ಓದಿದರು. ಇಷ್ಟು ಕಾಮಗಾರಿಗಳನ್ನು ಅಳವಡಿಸಲು ಗ್ರಾಮಸ್ಥರು ಬೇಡಿಕೆಗಳನ್ನು ಸಲ್ಲಿಸಿದರು. ಹೆಚ್ಚುವರಿ ಕ್ರಿಯಾ ಯೋಜನೆ ಮಾಡಿ ಕೊಡುವುದಾಗಿ ಪಿಡಿಒ ಅವರು ತಿಳಿಸಿದರು. ಪಿಎಂಎವಾಯ್ ಮನೆಗಳ ನಿಯಮಾನುಸಾರ ಆಯ್ಕೆ ಮಾಡಿ ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.
ಗ್ರಾಮದ ಹಿರಿಯರಾದ ರಾಮಚಂದ್ರಪ್ಪ ಜಾಧವ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಎಲ್ಲಾ ಅನುಷ್ಠಾನ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿಗಳು ಇದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸುಮಾಂಗಲಾ ಪತ್ತಾರ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯದರ್ಶಿಗಳಾದ ಮಹೇಶ ಭಗವತಿ ವಂದಿಸಿದರು.
