Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಗದಗದ ಶಾಸ್ತ್ರೀಜಿ ಬಿ.ಇಡಿ ಕಾಲೇಜಿನ ಡೊನೇಷನ್ ದಂಧೆಗೆ ಬ್ರೇಕ್: ದಲಿತ ವಿದ್ಯಾರ್ಥಿ ಪರಿಷತ್ ಹೋರಾಟಕ್ಕೆ ಮಣಿದ ಆಡಳಿತ ಮಂಡಳಿ

 

ಗದಗ: ಶಿಕ್ಷಣ ಎಂಬ ಪವಿತ್ರ ಕಾಶಿಯಲ್ಲಿ ಹಣದ ಹಪಾಹಪಿಗೆ ಬಿದ್ದ ಖಾಸಗಿ ಸಂಸ್ಥೆಯೊಂದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಘಟನೆಗೆ ಗದಗದಲ್ಲಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ತಕ್ಕ ಪಾಠ ಕಲಿಸಿದೆ. ಅಂಕಪಟ್ಟಿ ನೀಡಲು ಬರೋಬ್ಬರಿ 20,000 ರೂಪಾಯಿ ಬೇಡಿಕೆಯಿಟ್ಟಿದ್ದ ಶಾಸ್ತ್ರೀಜಿ ಬಿ.ಇಡಿ ಕಾಲೇಜಿನ ದರ್ಪವನ್ನು ಸಂಘಟನೆಯ ಹೋರಾಟ ಧೂಳೀಪಟ ಮಾಡಿದೆ.

ಗದಗ ನಗರದ ಶಾಸ್ತ್ರೀಜಿ ಬಿ.ಇಡಿ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ಎಸ್‌ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಅವರ ಮೂಲ ಅಂಕಪಟ್ಟಿ ಹಾಗೂ ದಾಖಲಾತಿಗಳನ್ನು ನೀಡಲು ಆಡಳಿತ ಮಂಡಳಿ ಹಠಕ್ಕೆ ಬಿದ್ದಿತ್ತು. ಸರ್ಕಾರದ ಆದೇಶದಂತೆ ಅಂಕಪಟ್ಟಿ ನೀಡಿ ಎಂದು ಕೇಳಿದ ಬಡ ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂಪಾಯಿ ಡೊನೇಷನ್ ನೀಡುವಂತೆ ಕಿರುಕುಳ ನೀಡುತ್ತಿತ್ತು. ಬಡತನದಲ್ಲೂ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಪಾಲಿಗೆ ಕಾಲೇಜಿನ ಈ ಧೋರಣೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು.

ಈ ಅನ್ಯಾಯದ ಸುದ್ದಿ ತಿಳಿಯುತ್ತಿದ್ದಂತೆಯೇ ಕಣಕ್ಕಿಳಿದ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷರಾದ ಸುರೇಶ ವಾಯ್. ಚಲವಾದಿ ಕಾಲೇಜು ಆವರಣದಲ್ಲೇ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

ಶಿಕ್ಷಣ ಸಂಸ್ಥೆಗಳು ಸರಸ್ವತಿ ಮಂದಿರಗಳಾಗಬೇಕೇ ಹೊರತು, ಬಡವರ ರಕ್ತ ಹೀರುವ ದಂಧೆ ಕೇಂದ್ರಗಳಾಗಬಾರದು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ದಲಿತ ವಿದ್ಯಾರ್ಥಿಗಳನ್ನು ಸತಾಯಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಸುರೇಶ ಚಲವಾದಿ ಅವರು ಕಾಲೇಜು ಪ್ರಾಚಾರ್ಯರ ಮುಂದೆ ಗುಡುಗಿದರು.

ಸಂಘಟನೆಯ ತೀವ್ರ ಪ್ರತಿಭಟನೆ ಮತ್ತು ಖಡಕ್ ಎಚ್ಚರಿಕೆಗೆ ಬೆದರಿದ ಕಾಲೇಜು ಮಂಡಳಿ, ತನ್ನ ಹಠಮಾರಿತನ ಬಿಟ್ಟು ತಕ್ಷಣವೇ ಮಂಡಿಯೂರಿತು. ಸ್ಥಳದಲ್ಲೇ ವಿದ್ಯಾರ್ಥಿಗಳ ಎಲ್ಲಾ ಮೂಲ ದಾಖಲಾತಿಗಳನ್ನು ಯಾವುದೇ ಹಣ ಪಡೆಯದೆ ಹಸ್ತಾಂತರಿಸಲಾಯಿತು. ಈ ಮೂಲಕ ದಲಿತ ವಿದ್ಯಾರ್ಥಿ ಪರಿಷತ್ ನಡೆಸಿದ ಮಿಂಚಿನ ಕಾರ್ಯಾಚರಣೆಗೆ ದೊಡ್ಡ ಜಯ ಸಿಕ್ಕಂತಾಗಿದೆ.

ಜಿಲ್ಲೆಯ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದಿಗೂ ಇಂತಹ ಅಕ್ರಮ ವಸೂಲಿಯಲ್ಲಿ ತೊಡಗಿವೆ. ಇಂತಹ ದಂಧೆಕೋರ ಸಂಸ್ಥೆಗಳ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯು ಎಚ್ಚರಿಕೆ ನೀಡಿದೆ.

Related posts

ಗದಗ ನಗರದ ಜಲಾವೃತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ,

satyadarshana

ಗೌತಮ ಬುದ್ದ ಏಷಿಯಾದ ಬೆಳಕು: ಕೆ ರಾಘವೇಂದ್ರ ಹಿಟ್ನಾಳ

satyadarshana

ರೋಣ ಸಿ.ಡಿ.ಪಿ.ಒ.ಬಸಮ್ಮ ಹೂಲಿ ಲೋಕಾಯುಕ್ತ ಬಲೆಗೆ….!

satyadarshana

Leave a Comment