ಕೊಪ್ಪಳ ಏಪ್ರಿಲ್ 04: ಏಕಕಾಲಕ್ಕೆ ನಾಲ್ಕು ನ್ಯಾಯಾಲಯ ನಡೆಯುವ ಸಾಮರ್ಥ್ಯದ ಯಲಬುರ್ಗಾ ತಾಲೂಕಿನ ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆ ಮೂಲಕ 
ಯಲಬುರ್ಗಾ ತಾಲೂಕಿನಲ್ಲಿ ಏಪ್ರೀಲ್ 04 ಐತಿಹಾಸಿಕ ದಿನವಾಗಿ ದಾಖಲಾಯಿತು.
ಈ ಐತಿಹಾಸಿಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೊಪ್ಪಳ, ಕುಷ್ಟಗಿ, ಕುಕನೂರ, ರೋಣ ಹಾಗೂ ಗಜೇಂದ್ರಗಡ ಭಾಗದ ವಕೀಲರು, ನಿವೃತ್ತ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನ್ಯಾಯಮೂರ್ತಿಗಳೊಂದಿಗೆ ಗ್ರೂಪ್ ಫೋಟೊ ತೆಗೆಯಿಸಿಕೊಂಡು ಸಂಭ್ರಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಹಾಗೂ ಹೈಕೋರ್ಟನ ನ್ಯಾಯಮೂರ್ತಿಗಳಾದ ಗೌರವಾನ್ವಿತ ಹಂಚಾಟೆ ಸಂಜೀವ್ಕುಮಾರ್ ಅವರೊಂದಿಗೆ ಕುಕನೂರ ಪಟ್ಟಣದ ಮಾರ್ಗವಾಗಿ
ಯಲಬುರ್ಗಾ ಪಟ್ಟಣ ಪ್ರವೇಶಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲೆಯ ಆಡಳಿತ ನ್ಯಾಯಾಧೀಶರಾದ ಗೌರವಾನ್ವಿತ ಸಿ ಎಂ ಪೂಣಚ್ಚ ಅವರು ನ್ಯಾಯಮೂರ್ತಿಗಳು, ಶಾಸಕರು, ನ್ಯಾಯಾಧೀಶರು ಮತ್ತು ವಕೀಲರ ಸಮ್ಮುಖದಲ್ಲಿ
ಮೊದಲಿಗೆ ನೂತನ ನ್ಯಾಯಾಲಯ ಅಂಗಳದಲ್ಲಿ ಸಸಿ ನೆಟ್ಟರು.
ಬಳಿಕ ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ಈ ಮೂಲಕ ಯಲಬುರ್ಗಾ ತಾಲೂಕಿನ ನ್ಯಾಯಾಂಗಕ್ಕೆ ಹೊಸ ಗರಿ ಮೂಡಿತು.
ಇದೆ ವೇಳೆ ನ್ಯಾಯಮೂರ್ತಿಗಳಾದ ಸಿ ಎಂ ಪೂಣಚ್ಚ ಅವರು ವಕೀಲರೊಂದಿಗೆ ನ್ಯಾಯಾಲಯದ ಸಭಾಂಗಣದಲ್ಲಿ ಮತ್ತು ನ್ಯಾಯಾಲಯದ ದ್ವಾರಬಾಗಿಲ ಬಳಿಯಲ್ಲಿ ಗ್ರೂಪ್ ಫೋಟೊದಲ್ಲಿ ಭಾಗಿಯಾದರು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಚಂದ್ರಶೇಖರ್ ಸಿ ಅವರು ಪ್ರಾಸ್ತಾವಿಕ ಮಾತನಾಡಿ ಯಲಬುರ್ಗಾ ಪಟ್ಟಣದ ಐತಿಹಾಸಿಕ ಹಿನ್ನೆಲೆ ತಿಳಿಸಿ ಏಪ್ರೀಲ್ 4 ಯಲಬುರ್ಗಾ ತಾಲೂಕಿಗೆ ಐತಿಹಾಸಿಕ ದಿನ ಎಂದು ಬಣ್ಣಿಸಿ ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆಯಾಗಿದ್ದಕ್ಕೆ ಸಂತಷ ವ್ಯಕ್ತಪಡಿಸಿದರು.
ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಕೊಪ್ಪಳ ಹಾಗೂ ಬಾರ್ ಅಸೋಸಿಯೇಷನ್ ಯಲಬುರ್ಗಾ ಇವರ ಸಂಯುಕ್ತಾಶ್ರಯದಲ್ಲಿ ನಡೆದ
ಸಮಾರಂಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ. ಕಣವಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಯಲಬುರ್ಗಾ ಜೆ.ಎಂ.ಎಫ್.ಸಿ ಸಂಜಯ್ ಕುಮಾರ್ ಪಾಚಾಪೂರ, ನ್ಯಾಯಾಧೀಶರಾದ ರಂಗಸ್ವಾಮಿ ಜೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಯಲಬುರ್ಗಾ ವಕೀಲರ ಸಂಘದ ಅಧ್ಯಕ್ಷರಾದ ಸುಭಾಷಚಂದ್ರ ಎಸ್. ಹೊಂಬಳ, ಪ್ರಧಾನ ಕಾರ್ಯದರ್ಶಿ ಇ.ಟಿ. ಮಹಾಂತೇಶ ಹಾಗೂ ಉಪಾಧ್ಯಕ್ಷರಾದ ಎಂ.ಎಸ್. ನಾಯ್ಕರ್, ಲೋಕೋಪಯೋಗಿ ಇಲಾಖೆ ಕೊಪ್ಪಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹೇಮಂತ್ ರಾಜ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ಹಿರಿಯ ಹಾಗೂ ಕಿರಿಯ ವಕೀಲರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಯಲಬುರ್ಗಾ ಬಾರ್ ಅಸೋಸಿಯೇಷನ್ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
