ಗಜೇಂದ್ರಗಡ: ಜೀವನದಲ್ಲಿ ಪ್ರತಿಯೊಬ್ಬರೂ ಕಠಿಣ ಅಭ್ಯಾಸ, ನಿರಂತರ ಸಾಧನೆ ಮಾಡುವುದರ ಜೊತೆಗೆ ಅನಗತ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳದೇ ಸಾಧನೆಯ ಶಿಖರವನ್ನೇರಲು ಪಣತೊಡಬೇಕು ಎಂದು ಗಜೇಂದ್ರಗಡ ಠಾಣೆಯ ಪಿಎಸ್ಐ ಸೋಮನಗೌಡ ಗೌಡ್ರ ಹೇಳಿದರು.
ಗಜೇಂದ್ರಗಡ ತಾಲ್ಲೂಕಿನ ಮ್ಯಾಕಲಝರಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ಅಂಗವಾಗಿ ಸ್ಪರ್ಧಾ ಸಾಮ್ರಾಜ್ಯ ಸ್ಟಡಿ ಸರ್ಕಲ್ ಇವರ ಆಶ್ರಯದಲ್ಲಿ ಭಾನುವಾರ ದೇವಸ್ಥಾನದ ಆವರಣದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನವನ ಬದುಕಿನಲ್ಲಿ ಸಮಯ ಕೋಟಿ ಕೊಟ್ಟರೂ ಸಿಗದು. ಹೀಗಾಗಿ ವಿವಿಧ ಹುದ್ದೆಗಳಿಗೆ ತಯಾರಿ ನಡೆಸಿರುವ ಅಭ್ಯರ್ಥಿಗಳು ವೇಳೆಗೆ ಬಹಳ ಮಹತ್ವ ನೀಡಬೇಕು. ಅಂದಾಗ ಮಾತ್ರ ದೇಶ ಮೆಚ್ಚುವಂತಹ ಸಾಧನೆಗೈಲು ಸಾಧ್ಯ. ಜೀವನದಲ್ಲಿ ಎಲ್ಲರೂ ಯಶಸ್ಸು ಕಾಣಲು ಕನಸು ಕಾಣುತ್ತಾರೆ ಅದಕ್ಕೆ ತಕ್ಕುದಾದ ತಯಾರಿ ಮಾಡುವುದಿಲ್ಲ. ಆದ್ದರಿಂದ ಜಾತ್ರೆಗಳಲ್ಲಿ ಮನರಂಜನೆಗೆ ಒತ್ತು ನೀಡದೆ ಜ್ಞಾನಾರ್ಜನೆಗೆ ಮಹತ್ವ ನೀಡಿರುವುದು ಶ್ಲಾಘನೀಯ ಎಂದರು. ಇಂತಹ ಉಪಯುಕ್ತ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಹಾಗೂ ಅಭ್ಯರ್ಥಿಗಳ ಸ್ಪರ್ಧಾತ್ಮಕ ಭಾವನೆಯಿಂದ ಭಾಗವಹಿಸಿ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು. ಬದಲಾಗಿ ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಿದಾಗ ಮಾತ್ರ ಯಶಸ್ಸು ಎಂಬ ಪದಕ್ಕೆ ಅರ್ಥ ಬರುತ್ತದೆ ಎಂದು ಸಲಹೆ ನೀಡಿದರು. 
ಸಂಸ್ಥೆಯ ಅಧ್ಯಕ್ಷ ಹನಮಂತ ಕುಕಬಾಯಿ ಮಾತನಾಡಿ, ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಇದ್ದೆ ಇರುತ್ತದೆ ಅದನ್ನು ಹೊರಸೊಸುವಂತೆ ಮಾಡುವ ಗುರುತರ ಜವಾಬ್ದಾರಿಗಾಗಿ ಇಂತಹ ವೇದಿಕೆಯನ್ನು ಕಲ್ಪಿಸಿದ್ದೇವೆ ಎಂದರು. ಯುವಕರಲ್ಲಿ ಕೇವಲ ಜ್ಞಾನ ಇದ್ದರೆ ಸಾಲದು ಅವರಲ್ಲಿ ಆಕರ್ಷಕ ವ್ಯಕ್ತಿತ್ವ, ಸ್ನೇಹಪರತೆ, ಸಮಾಜಿಕ ಕಳಕಳಿ ಇರಬೇಕು. ಉತ್ತಮ ಸಾಧನೆ ಮಾಡುವ ಮೂಲಕ ತಂದೆ–ತಾಯಿಗಳಿಗೆ, ಗುರುಗಳಿಗೆ ಹಾಗೂ ಗ್ರಾಮಕ್ಕೆ ಉತ್ತಮ ಹೆಸರು ತಂದು ಕೊಡುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದರು.
ಈ ವೇಳೆ ಕೊಪ್ಪಳ, ಬಾಗಲಕೋಟ, ಗದಗ, ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಅನೇಕ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಸಂಸ್ತಾಪಕ ವೆಂಕಟೇಶ ಕುಕಬಾಯಿ, ಶರಣಪ್ಪ ಅವಾರಿ, ಸಣ್ಣಹನಮಪ್ಪ ಕುಕಬಾಯಿ, ದುರಗಪ್ಪ ಯ.ತಾತಲ, ಶರಣಪ್ಪ ಕೆ. ತಾತಲ್, ಮಲ್ಲಿಕಾರ್ಜುನ ಅವಾರಿ, ದೇವಪ್ಪ ತಾತಲ್, ಮಂಜುನಾಥ್ ಆಡವಿಭಾವಿ, ಕಳಕಪ್ಪ ಅಂಗಡಿ, ಕಳಕಪ್ಪ ನರಿ, ದುರಾಗನಗೌಡ ಪಾಟೀಲ್, ವೆಂಕಟೇಶ್ ಕಟಿಗಾಲ್, ಪ್ರವೀಣ್ ಕಟಿಗಾಲ್, ಶಿವರಾಜ್ ಬಣ್ಣದ, ರಾಘವೇಂದ್ರ ಅಂಬೋರೆ, ಅಶ್ವಿನಿ ಮಾಮಾದಾಪುರ, ತಿಮ್ಮಣ್ಣ ತಾತಲ್, ಯಮನಪ್ಪ ಕುಕಬಾಯಿ, ಎ. ಕೆ. ಒಂಟಿ, ರಂಗನಾಥ್ ಡೊಳ್ಳಿನ್, ಅಂದಪ್ಪ ಅಂಗಡಿ, ಸಕ್ರಗೌಡ ಪಾಟೀಲ್, ಶಿವಪ್ಪ ಬಣ್ಣದ, ಅರವಿಂದ್ ಬಂಡಿ ಇದ್ದರು.
ಗಜೇಂದ್ರಗಡ ತಾಲ್ಲೂಕಿನ ಮ್ಯಾಕಲಝರಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ಅಂಗವಾಗಿ ಸ್ಪರ್ಧಾ ಸಾಮ್ರಾಜ್ಯ ಸ್ಟಡಿ ಸರ್ಕಲ್ ಇವರ ಆಶ್ರಯದಲ್ಲಿ ಭಾನುವಾರ ದೇವಸ್ಥಾನದ ಆವರಣದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮಕ್ಕೆ ಪಿಎಸ್ಐ ಸೋಮನಗೌಡ ಗೌಡ್ರ ಚಾಲನೆ ನೀಡಿದರು
