ಒಳಮೀಸಲಾತಿಯ ಒಳಜಗತ್ತು –
. ಒಳಮೀಸಲಾತಿಯ ಚೆಂಡು
. ಉರುಳಿ ಬಂದಿದ್ದು ಎಲ್ಲಿಗೆ ?
2023 ವಿಧಾನಸಭಾ ಚುನಾವಣೆಯ ಸಂದರ್ಭ . ಡಾ ಜಿ ಪರಮೇಶ್ವರ್ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ರಚನಾ ಸಮಿತಿಯ ಅಧ್ಯಕ್ಷರು . ಗ್ಯಾರೆಂಟಿಗಳನ್ನು ಪ್ರಣಾಳಿಕೆಗಳ ಮೂಲಕ ಹೇಳಬೇಕಿತ್ತು . ಆದರೆ ಅದಕ್ಕೆ ಅವಕಾಶ ಕೊಡದೆ ಚುನಾವಣಾ ಸಭೆಗಳಲ್ಲೇ ಘೋಷಿಸಲಾಗುತ್ತಿದೆ .
ಹೀಗಾದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೇನು ಕೆಲಸ ಎಂದು ಸ್ವಲ್ಪ ದಿನ ಡಾ ಪರಮೇಶ್ವರ್ ಮುನಿಸಿಕೊಂಡಿದ್ದರು . ಕೊನೆಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೆ ಒಂದು ಬಲವಾದ ಭರವಸೆಯನ್ನು ಘೋಷಿಸುವ ಅವಕಾಶ ಸಿಕ್ಕಿತು . ಒಳ ಮೀಸಲಾತಿಯ ಕುರಿತಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಯಿತು . ‘ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲೇ ನ್ಯಾ ಸದಾಶಿವ ವರದಿಗೆ ಒಪ್ಪಿಗೆ ಕೊಟ್ಟು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ‘ .
ಕಾಂಗ್ರೆಸ್ ಅಧಿಕಾರಕ್ಕೆ ಬಂತು . ಸಚಿವ ಸಂಪುಟ ಸಭೆಗಳು ನೆಡದೆ ನೆಡದವು . ಒಳ ಮೀಸಲಾತಿ ವಿಷಯ ಪ್ರಸ್ತಾಪವಾಗದೇ ಮೂಲೆ ಸೇರಿತು .
ಅತ್ತ ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ ಮಾದಿಗ ವಿಶ್ವರೂಪಂ ‘ ಸಭೆಯಲ್ಲಿ ಭಾಗವಹಿಸಿ ತೋರಿಸಿದ ಬದ್ಧತೆಗೆ ಕಾಂಗ್ರೆಸ್ ಒಳಗೊಳಗೆ ನಡುಗಿ ಹೋಗಿತ್ತು . ಇತ್ತ ಕರ್ನಾಟಕದಲ್ಲಿ ಆರಂಭವಾದ ಮಾದಿಗ ಮುನ್ನಡೆ ಸಮಾವೇಶಗಳು , ಅದಕ್ಕೆ ಸಿಕ್ಕ ಜನಸ್ಪಂದನದಿಂದಾಗಿ ಕಾಂಗ್ರೆಸ್ ತಾನು ಕೊಟ್ಟ ಪ್ರಣಾಳಿಕೆಯಲ್ಲವಾದಿರಾ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಯಿತು .
ಜನವರಿ 17 , 2024 ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಸಭೆ . ‘ ಸಂವಿಧಾನದ 341ನೇ ವಿಧಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡಬೇಕು ‘ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಂಪುಟ ಸಭೆ ನಿರ್ಧರಿಸಿತು . ಸಂಪುಟ ಸಭೆಯ ನಂತರ ಇದನ್ನು ಪತ್ರಕರ್ತರಿಗೆ ವಿವರಿಸಲು ಬಂದ ಸಮಾಜ ಕಲ್ಯಾಣ ಸಚಿವರು ತಡಬಡಾಯಿಸಿದರು .
341ನೇ ವಿಧಿಗೆ ತಿದ್ದುಪಡಿ ಆಗಬೇಕು ಎಂದು ನ್ಯಾ ಉಷಾಮೆಹ್ರಾ ಆಯೋಗ 2008 ರಲ್ಲಿ ಹೇಳಿದ್ದು ನಿಜ . 2008 ರಿಂದ 2013 ರವರಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯೂಪಿಎ ಸರ್ಕಾರವೇ ಇತ್ತಲ್ಲ ಆಗೇಕೆ 341ನೇ ವಿಧಿಗೆ ತಿದ್ದುಪಡಿ ಮಾಡಲಿಲ್ಲ ? 2013 ರಿಂದ 2018ರವರಗೆ ಕರ್ನಾಟಕದಲ್ಲಿ ಸಿದ್ಧಾರಾಮಯ್ಯ ನೇತೃತ್ವದ ಬಹುಮತದ ಸರ್ಕಾರವೇ ಇತ್ತಲ್ಲ ಆಗೇಕೆ ಈ ಶಿಫಾರಸ್ಸನ್ನು ಕಳುಹಿಸಲಿಲ್ಲ ? – ಪತ್ರಕರ್ತರ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವರಲ್ಲಿ ಉತ್ತರ ಇರಲಿಲ್ಲ , ಬೆವರೊರಸಿಕೊಂಡು ಎದ್ದ ಸಚಿವರು ‘ ಯಾರೋ ಮೀಡಿಯಾದವರನ್ನೆಲ್ಲ ಟ್ಯೂನ್ ಮಾಡಿ ಕಳುಹಿಸಿದ್ದಾರೆ ‘ ಎಂದು ಗೊಣಗಿಕೊಂಡು ಹೋದರೆಂದು ಹಾಜರಿದ್ದ ಪತ್ರಕರ್ತರೊಬ್ಬರು ಮತ್ತೆಂದೊ ಸಿಕ್ಕಾಗ ಹೇಳಿದರು .
* 2020 ರ ತಮ್ಮ ತೀರ್ಪಿನಲ್ಲೆ ನ್ಯಾ ಅರುಣಮಿಶ್ರಾ ‘ 341ನೇ ವಿಧಿಗೆ ತಿದ್ದುಪಡಿ ತರುವ ವಿಷಯ ಅಪ್ರಸ್ತುತ ‘ ಎಂದು ಸ್ಪಷ್ಟವಾಗಿ ಹೇಳಿದ್ದರು .
* 2023 ರ ಅಕ್ಟೋಬರ್ ನಲ್ಲಿ ಒಳಮೀಸಲಾತಿಯ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಏಳು ಸದಸ್ಯರ ಪೀಠವನ್ನು ರಚಿಸಿತು .
* ಕೇಂದ್ರ ಸರ್ಕಾರ ಒಳಮೀಸಲಾತಿಯ ಪರವಾಗಿ ವಕಾಲತ್ತು ವಹಿಸಿತು .
* ವಿಚಾರಣೆ ಆರಂಭವಾಗಲು ಕೆಲದಿನಗಳು ಇರುವಾಗ 2024 ಜನವರಿ 17 ರಂದು ಕರ್ನಾಟಕ ಸರ್ಕಾರ ‘ 341 ನೇ ವಿಧಿಗೆ ತಿದ್ದುಪಡಿ ತನ್ನಿ ‘ ಎಂದು ಕೇಂದ್ರಕ್ಕೆ ಪತ್ರ ಬರೆಯಿತು .
ಕರ್ನಾಟಕ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸುಪ್ರೀಂಕೋರ್ಟಿನಲ್ಲಿ ಆಗುತ್ತಿದ್ದ ಬೆಳವಣಿಗೆಗಳ ಬಗ್ಗೆ ಸ್ವಲ್ಪವೂ ನಿಗಾ ಇರಲಿಲ್ಲ . ತಾನು ಏನೋ ಒಂದು ಶಿಫಾರಸು ಮಾಡಿ ಮುಖ ಉಳಿಸಿಕೊಂಡೆ ಎಂಬ ಕಾಟಾಚಾರ ಮಾತ್ರ ಇಡೀ ಬೆಳವಣಿಗೆಯಲ್ಲಿ ಎದ್ದು ಕಾಣುತ್ತಿತ್ತು .
ದುರಂತವೆಂದರೆ ಆಗಸ್ಟ್ 1 ರಂದು ಸುಪ್ರೀಂಕೋರ್ಟಿನ ಐತಿಹಾಸಿಕ ತೀರ್ಪು ಹೊರಬಿತ್ತು . ಆಗಲೂ ನಮ್ಮ ಸಮಾಜ ಕಲ್ಯಾಣ ಸಚಿವರು ಹೇಳಿದ್ದು ‘ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ ! ‘
ಇಂತಹ ‘ ಬಂಡೆ ‘ ಸರ್ಕಾರದ ಎದುರು ಒಳ ಮೀಸಲಾತಿಯ ಚೆಂಡು ಉರುಳಿ ಬಂದಿದೆಯೇ ?
ಕಾಲವೇ ಉತ್ತರಿಸಬೇಕು .
ಮಂಜುನಾಥ ಬುರಡಿ ಗದಗ ಜಿಲ್ಲಾ ಮಾದಿಗ ದಂಡೋರ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

