ಗದಗ (ಸತ್ಯ ದರ್ಶನ ) ಸೆಪ್ಟೆಂಬರ್ 29: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಇದರಿಂದ ದೇಶದ 80 ಕೋಟಿ ಬಡವರಿಗೆ ಇನ್ನೂ ಮೂರು ತಿಂಗಳ ಉಚಿತ ಪಡಿತರ ಸಿಗಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು. 
ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರದಂದು ಚಾಲನೆ ನೀಡಿ ಅವರು ಮಾತನಾಡಿದರು . ಸರ್ಕಾರದ ಮೂಲಧ್ಯೇಯ ದುರ್ಬಲರ , ಬಡವರ, ಶ್ರಮಿಕರ ಆರ್ಥಿಕಾಭಿವೃದ್ಧಿ ಮಾಡುವುದಾಗಿದ್ದು ಅದರಂತೆ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಲಾಗುತ್ತಿದೆ. ಕೇಂದ್ರದಂತೆ ರಾಜ್ಯದಲ್ಲಿಯೂ ಇದೇ ನಿಯಮ ಜಾರಿಗೊಳಿಸಲಾಗಿದೆ ಎಂದರು.
ರಾಜ್ಯದಲ್ಲಿ 16-18 ಸಾವಿರ ಕೋಟಿ ಅನುದಾನ ಹೊಂದಿರುವ ಬೃಹತ್ ಇಲಾಖೆ ಲೋಕೋಪಯೋಗಿ ಇಲಾಖೆಯಾಗಿದೆ. ಅತೀವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಪರಿಹಾರ ಕಲ್ಪಿಸಲಾಗುತ್ತಿದೆ. ಸರ್ಕಾರಿ ಕಟ್ಟಡ , ರಸ್ತೆ ಹಾನಿಗಳ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ ಎಂದರು. 
ಹಾತಲಗೇರಿ ಗ್ರಾಮದಲ್ಲಿ ಇಂದು ನೂತನ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ವಾಲ್ಮೀಕಿ ಸಮುದಾಯ ಭವನದ ಕಾಮಗಾರಿ ಗುಣಮಟ್ಟ ದಿಂದ ಕೂಡಿರಬೇಕು.
ಕಳಪೆ ಕಾಮಗಾರಿ ಸಹಿಸಲಾಗದು. ಅಗತ್ಯವಿದ್ದಲ್ಲಿ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದರು
ಹಾತಲಗೇರಿ ಗ್ರಾಮದ ಮೂಲ ಸೌಕರ್ಯಗಳಿಗೆ ಈಗಾಗಲೇ ಸೌಲಭ್ಯವನ್ನು ಕಲ್ಪಿಸಲಾಗಿದೆ. ನರಗುಂದ ವಿಧಾನಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಸೂರು ಕಲ್ಪಿಸಲು 2 -3 ಸಾವಿರ ಮನೆಗಳಿಗೆ ಮಂಜೂರಾತಿ ಪ್ರಯತ್ನ ನಡೆದಿದೆ. ಎಲ್ಲರಿಗೂ ಸೂರು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಬಡವರ, ದೀನ ದಲಿತರ, ಹಿಂದುವರ್ಗಗಳ ಜನರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಗುರುವಾರ ಸಣ್ಣ ನೀರಾವರಿ ಇಲಾಖೆಯ 60. ಲಕ್ಷ ರೂ, ಅನುದಾನದಲ್ಲಿ ಗದ್ದಿಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ, ಗ್ರಾಮದ ಹತ್ತಿರವಿರುವ ಹಳ್ಳಕ್ಕೆ ಅಡ್ಡಲಾಗಿ ಬಾಂದಾರ ನಿರ್ಮಾಣಕ್ಕೆ ಅಂದಾಜು 40 ಲಕ್ಷ ರೂ,ವೆಚ್ಚದ ಕಾಮಗಾರಿ, ಜಿಲ್ಲಾ ಪಂಚಾಯತಿಯ 2022-23 ನೇ ಸಾಲಿನ 25 ಲಕ್ಷ ರೂ, ಅನುದಾನದಲ್ಲಿ ಗ್ರಾಮದ ಎಸ್.ಸಿ ಕಾಲೋನಿಯಿಂದ ರಾಮಣ್ಣ ತಳವಾರ ಇವರ ಮನೆಯವರೆಗೆ ಯುಜಿಡಿ ನಿರ್ಮಾಣ,ಸಮಾಜ ಕಲ್ಯಾಣ ಇಲಾಖೆಯ 2022-23 ನೇ ಸಾಲಿನ 20 ಲಕ್ಷ ರೂ, ಅನುದಾನದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
ಇದೇ ಸಂದರ್ಭದಲ್ಲಿ ಅಮೃತ ಶಾಲಾ ಯೋಜನೆ ಅಡಿಯಲ್ಲಿ 11 ಲಕ್ಷ ರೂ, ವೆಚ್ಚದಲ್ಲಿ ಶಾಲಾ ಕಲಿಕಾ ಅಭಿವೃದ್ಧಿ ಅಗತ್ಯವಿರುವ ಸಾಮಾಗ್ರಿಗಳ ಸಮಗ್ರ ಸೌಲಭ್ಯಗಳನ್ನು ಸಚಿವರು ಉದ್ಘಾಟಿಸಿದರು.
ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಗ್ರಾ.ಪಂ ಅಧ್ಯಕ್ಷೆ ಮಾದೇವಕ್ಕ ಮೇಲ್ಮನಿ, ಉಪಾಧ್ಯಕ್ಷ ಶಿವಕುಮಾರ ಕರಿಗೌಡ್ರ, ನಿಂಗಪ್ಪ ಮಣ್ಣೊರ, ವಸಂತ ಮೇಟಿ, ಪ್ರದೀಪ ಕುಮಾರ ನವಲಗುಂದ, ಮಹೇಶ ಮುನ್ನಬಾವಿ, ಬಸವರಾಜ ಬಡಿಗೇರ , ಯಲ್ಲಪ್ಪ ಬೇಲೇರಿ, ಮೈಲಾರಪ್ಪ ಕರಿಯವರ, ಗಣೇಶ ಪೂಜಾರ, ಕುಬೇರಪ್ಪ ಅಸುಂಡಿ, ಮಲ್ಲಮ್ಮ ಮಾಲದಾರ ಸೇರಿದಂತೆ ಇತರರು ಇದ್ದರು. ಸತೀಶ ಹೈತಾಪುರ , ವಸಂತಿ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋವಿಂದರಾಜ ಪೂಜಾರ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
