ವಿಜಯನಗರ: ಚಲಿಸುವ ರೈಲಿನಿಂದ ಬಿದ್ದು ಯುವಕ- ಯುವತಿ ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಕೊಟಗಿನಾಳ್ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿತ್ತು. ಇವರಿಬ್ಬರೂ ಬಳ್ಳಾರಿಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರೈಲಿನಿಂದ ಬಿದ್ದಿರೋ ಶಂಕೆ ವ್ಯಕ್ತವಾಗಿತ್ತು.
50 ಅಡಿ ದೂರದಲ್ಲಿ ಯುವತಿ ಹಾಗೂ ಯುವಕನ ಶವ ಪತ್ತೆಯಾಗಿತ್ತು. ಮೃತರಿಬ್ಬರೂ ಗಂಡ-ಹೆಂಡತಿಯಾಗಿದ್ದು, ಮುಕೇಶ (30) ಮತ್ತು ಭಗವತಿ (25 ವರ್ಷ) ಎಂದು ಗುರುತಿಸಲಾಗಿದೆ. ಮುಕೇಶ, ಟೈಲ್ಸ್ ಕೆಲಸ ಮಾಡುತ್ತಿದ್ದ ಕಾರ್ಮಿಕ.
ಮೃತರಿಬ್ಬರು ಅಜ್ಮೀರ್ ದ ನಿವಾಸಿಗಳು. ದಂಪತಿ ಟೈಲ್ಸ್ ಕೆಲಸಕ್ಕಾಗಿ ಅಜ್ಮೀರದಿಂದ ಬೆಂಗಳೂರಿಗೆ, ಹುಬ್ಬಳ್ಳಿ ಮಾರ್ಗವಾಗಿ ತೆರಳುಚವ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಮೃತ ಯುವಕನ ಸಹೋದರ ತಿಳಿಸಿದ್ದಾರೆ. ಬಾಗಿಲು ಬಳಿ ಕುಳಿತಿದ್ದ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಬಳ್ಳಾರಿಯ ರೈಲ್ವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
