ಸತ್ಯದರ್ಶನ
ಬೆಳಗಾವಿ, (ಡಿ.19): ಬೆಳಗಾವಿಯ ಅನಗೋಳದಲ್ಲಿ ದುಷ್ಕರ್ಮಿಗಳಿಂದ ವಿರೂಪಗೊಂಡಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಮರು ಸ್ಥಾಪನೆ ಮಾಡಲಾಗಿದೆ.
ಮೊನ್ನೆ(ಶುಕ್ರವಾರ ) ರಾತ್ರಿ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಅನಗೋಳದ ಕನಕದಾಸ ಕಾಲೋನಿಯಲ್ಲಿದ್ದ ರಾಯಣ್ಣ ಮೂರ್ತಿಯನ್ನು ವಿರೂಪಗೊಳಿಸಿದ್ದರು. ಸದ್ಯ ಅದೇ ಮೂರ್ತಿಯನ್ನು ಪೊಲೀಸರು ರಿಪೇರಿ ಮಾಡಿಸಿದ್ದು, ಮೊದಲಿನ ಜಾಗದಲ್ಲಿಯೇ ಮರು ಪ್ರತಿಷ್ಠಾಪಿಸಲಾಗಿದೆ
ಕುಂಭಮೇಳದ ಮೆರವಣಿಗೆಯೊಂದಿಗೆ ರಾಯಣ್ಣನ ಮೂರ್ತಿಗೆ ಅಭಿಷೇಕ ಮಾಡಿ. ಪೂಜೆ ಸಲ್ಲಿಸಿ ಗ್ರಾಮದ ಜನತೆ, ರಾಯಣ್ಣನ ಅಭಿಮಾನಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಮೂರ್ತಿಯನ್ನು ಅದ್ಧೂರಿಯಾಗಿ ಮರು ಪ್ರತಿಷ್ಠಾಪಿಸಲಾಯ್ತು.
ಈ ವೇಳೆ ರಾಯಣ್ಣ – ಚೆನ್ನಮ್ಮ ಪರವಾಗಿ ಘೋಷಣೆ ಮೊಳಗಿವು. ಬೆಳಗಾವಿ ನಮ್ಮದು ಘೋಷಣೆ ಕೂಗಿದರು. ಇದರಿಂದ ಕನ್ನಡಿಗರು, ರಾಯಣ್ಣನ ಅಭಿಮಾನಿಗಳ ಸಂಬ್ರಮ ಮುಗಿಲುಮುಟ್ಟಿತು. ಈ ಮೂಲಕ ಮೂಲಕ ಕನ್ನಡಿಗರು ಎಂಇಎಸ್ ಪುಂಡಾಟಕ್ಕೆ ತಕ್ಕೆ ತಿರುಗೇಟು ನೀಡಿದ್ದಾರೆ.
ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ದುಷ್ಕರ್ಮಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪಗೊಳಿಸಿದ್ದರು.
ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿ ಮೆರೆದಿದ್ದರು.
ಇದರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕರ್ನಾಟಕದ ಮೂಲೆ-ಮೂಲೆಗಳಿಂದ ಕನ್ನಡಿಗರು ಬೆಳಗಾವಿಯತ್ತ ಧಾವಿಸಿ ರಾಯಣ್ಣ ಮೂರ್ತಿ ಧ್ವಂಸ ಮಾಡಿದವರ ವಿರುದ್ಧ ಪ್ರತಿಭನಟೆ ಮಾಡಿದರು. ಅಲ್ಲದೇ ದುಸ್ಕರ್ಮಿಗಳನ್ನು ಬಂಧಿಸಿ ಸೂಕ್ತ ಕ್ರಮಜರುಗಿಸಬೇಕೆಂದು ಆಗ್ರಹಿಸಿದ್ದರು.
ಆರೋಪಿಗಳ ಬಂಧನ
ಬೆಳಗಾವಿಯ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿ 27 ಮಂದಿಯನ್ನು ಬಂಧಿಸಲಾಗಿದೆ. ಸರ್ಕಾರದ ಮತ್ತು ಬೆಳಗಾವಿಯ ಪೊಲೀಸ್ ಇಲಾಖೆಗೆ ಸುಮಾರು 26 ವಾಹನಗಳನ್ನು ಪುಂಡರು ಧ್ವಂಸಗೊಳಿಸಿದ್ದರು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ ಕೆ ತ್ಯಾಗರಾಜನ್ ತಿಳಿಸಿದ್ದಾರೆ.
ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಾನೂನು ಸುವ್ಯವಸ್ಥೆ ಹಾಳು ಮಾಡುವುದು, ಭಾಷಾ ವೈಷಮ್ಯ ಮೂಡಿಸುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನೂರಾರು ಎಂಇಎಸ್ ಪುಂಡರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಬೆಳಗಾವಿಯಲ್ಲಿ ನಡೆದ ಅಹಿತಕರ ಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ 27 ಮಂದಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬೆಳಗಾವಿ ಪೊಲೀಸರು ಒಟ್ಟು 27 ಮಂದಿಯನ್ನ ಬಂಧಿಸಿ ಇಂದು(ಶನಿವಾರ) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಜಿಎಂಎಫ್ಸಿ ಕೋರ್ಟ್, ಆರೋಪಿಗಳನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
