ಗದಗ: ( ಸತ್ಯ ದರ್ಶನ ) ಸೆಪ್ಟೆಂಬರ್ 13 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡಿ ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಾಲಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು.
ಭೇಟಿ ನೀಡಿದ ಸಂದರ್ಭದಲ್ಲಿ ವಯಸ್ಕ ವ್ಯಕ್ತಿಗಳು ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿರುತ್ತದೆ. ಆದರೆ ಯಾವುದೇ ಅಪ್ರಾಪ್ತರು / ಮಕ್ಕಳು ಭಿಕ್ಷೆಬೇಡುವುದು ಕಂಡು ಬಂದಿರುವುದಿಲ್ಲ. ಸ್ಥಳೀಯ ನಿವಾಸಿಗಳು, ಭಕ್ತರು ಮತ್ತು ಆಡಳಿತಾಧಿಕಾರಿಗಳನ್ನು ವಿಚಾರಿಸಲಾಗಿ, ಜಾತ್ರೆ ಹಬ್ಬ-ಹರಿದಿನ ವಿಶೇಷ ದಿನಗಳಂದು ಭಕ್ತರ ಸಂಖ್ಯೆ ಹೆಚ್ಚಾಗುವ ಕಾರಣ ಪಕ್ಕದ ಜಿಲ್ಲೆಗಳಾದ ಕೊಪ್ಪಳ, ಬಾಗಲಕೋಟೆಯಿಂದ ಭಿಕ್ಷೆಬೇಡಲು ಬರುತ್ತಾರೆ ಎಂದು ತಿಳಿಸಿರುತ್ತಾರೆ.
ಇನ್ನು ಮುಂದೆ ಯಾರಾದರೂ ಭಿಕ್ಷೆಬೇಡುವುದು ಕಂಡುಬಂದರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಕರೆ ಮಾಡುವಂತೆ ತಿಳಿಸಲಾಯಿತು. ಭಿಕ್ಷಾಟನೆಯಲ್ಲಿ ತೊಡಗಿದ ವಯಸ್ಕರಿಗೆ ತಿಳುವಳಿಕೆ ನೀಡಿ ಇನ್ನು ಮುಂದೆ ಭಿಕ್ಷಾಟನೆ ಮಾಡದಂತೆ ತಿಳಿವಳಿಕೆ ನೀಡಿ ಬರಲಾಯಿತು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
