ಯುಗಾದಿ ಸಂಪ್ರದಾಯಗಳಲ್ಲಿ ಅಡಗಿರುವ ಆಯುರ್ವೇದ ಜ್ಞಾನ
ಯುಗಾದಿ ಕರ್ನಾಟಕದಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುವ ಪ್ರಮುಖ ಹಬ್ಬವಾಗಿದೆ. ಇದು ಸಾಮಾನ್ಯವಾಗಿ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಆಚರಿಸಲಾಗುತ್ತದೆ. ಈ ಸಮಯವು ಪ್ರಕೃತಿಯಲ್ಲಿ ವಸಂತ ಋತು ಪ್ರಾರಂಭವಾಗುವ ಕಾಲವೂ ಆಗಿದ್ದು, ಆಯುರ್ವೇದದ ದೃಷ್ಟಿಯಿಂದ ದೇಹದ ಆರೈಕೆಗೆ ಅತ್ಯಂತ ಮಹತ್ವದ ಸಮಯವಾಗಿದೆ. ಆಯುರ್ವೇದದ ಪ್ರಕಾರ ವಸಂತ ಋತುವಿನಲ್ಲಿ ಕಫ ದೋಷ ಪ್ರಬಲವಾಗುತ್ತದೆ. ಚಳಿಗಾಲದಲ್ಲಿ ಸಂಚಿತವಾಗಿದ್ದ ಕಫವು ಈ ಋತುವಿನಲ್ಲಿ ಕರಗಲು ಪ್ರಾರಂಭವಾಗುತ್ತದೆ. ಇದರಿಂದ ಜ್ವರ, ಶೀತ, ಕೆಮ್ಮು, ಅಲರ್ಜಿ, ತೂಕ ಹೆಚ್ಚಳ, ಜಠರಾಗ್ನಿ ಮಂದತೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಜಠರಾಗ್ನಿ ಮತ್ತು ಆಹಾರ-
ವಸಂತ ಋತುವಿನಲ್ಲಿ ಜಠರಾಗ್ನಿ ಸ್ವಲ್ಪ ಮಂದವಾಗಿರುತ್ತದೆ. ಆದ್ದರಿಂದ: ಹಗುರವಾದ, ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಬೇಕು, ಕಹಿ, ಕಟು ಮತ್ತು ಕಷಾಯ ರಸ ಪ್ರಧಾನ ಆಹಾರ ಉಪಯುಕ್ತ ಎಣ್ಣೆಯುಕ್ತ, ಭಾರವಾದ, ಸಿಹಿ ಆಹಾರ ಕಡಿಮೆ ಮಾಡಬೇಕು ಜೇನು, ಬಟಾಣಿ, ಹಸಿರು ತರಕಾರಿಗಳು, ಮಜ್ಜಿಗೆ ಉತ್ತಮ
ಯುಗಾದಿಯ ಪ್ರಮುಖ ಸಂಪ್ರದಾಯವಾದ ಬೇವು-ಬೆಲ್ಲ ತಿನ್ನುವುದು ಈ ಋತುಚರ್ಯೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಬೇವು ಕಹಿ ರಸದಾಗಿದ್ದು ಕಫ ಮತ್ತು ಪಿತ್ತ ದೋಷಗಳನ್ನು ಸಮತೋಲನಗೊಳಿಸುತ್ತದೆ ಹಾಗೂ ದೇಹವನ್ನು ಶುದ್ಧಗೊಳಿಸುತ್ತದೆ. ಬೆಲ್ಲವು ಸಿಹಿ ರಸದಾಗಿದ್ದು ಶಕ್ತಿಯನ್ನು ನೀಡುತ್ತದೆ. ಈ ಎರಡರ ಸಂಯೋಜನೆ ಜೀವನದ ಸುಖ-ದುಃಖಗಳನ್ನು ಸಮಭಾವದಿಂದ ಸ್ವೀಕರಿಸುವ ಸಂದೇಶವನ್ನೂ ನೀಡುತ್ತದೆ. ಹಾಗೆ ಎಣ್ಣೆ ಹಚ್ಚಿ ಬೇವಿನ ಎಲೆಗಳನ್ನು ನೀರಲ್ಲಿ ಹಾಕಿ ಸ್ನಾನ ಮಾಡುವುದರಿಂದ ಚರ್ಮ ಸಂಬಂದಿ ರೋಗಗಳನ್ನು ತಪ್ಪಿಸುವಲ್ಲಿ ಸಹಾಯಕವಾಗಿದೆ.
ಜೀವನಶೈಲಿ (ವಿಹಾರ)
ಪ್ರತಿದಿನ ವ್ಯಾಯಾಮ, ಯೋಗ, ಸೂರ್ಯ ನಮಸ್ಕಾರ ಮಾಡುವುದು ಉತ್ತಮ,ಉದ್ವರ್ಧನ (ಒಣ ಮಸಾಜ್) ಕಫ ನಿವಾರಣೆಗೆ ಸಹಕಾರಿ, ಹಗಲು ನಿದ್ರೆ ತಪ್ಪಿಸಬೇಕು, ಶುದ್ಧ ವಾತಾವರಣದಲ್ಲಿ ನಡೆಯುವುದು ಲಾಭಕಾರಿ.
ಹಾಗಾಗಿ ಯುಗಾದಿ ಹಬ್ಬವು ಕೇವಲ ಹೊಸ ವರ್ಷದ ಸಂಭ್ರಮವಲ್ಲ; ಅದು ಪ್ರಕೃತಿಯ ಬದಲಾವಣೆಯೊಂದಿಗೆ ದೇಹ ಮತ್ತು ಮನಸ್ಸನ್ನು ಹೊಂದಿಸಿಕೊಳ್ಳುವ ಆಯುರ್ವೇದದ ಜ್ಞಾನವನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ. ವಸಂತ ಋತುಚರ್ಯೆಯನ್ನು ಪಾಲಿಸುವುದರಿಂದ ಆರೋಗ್ಯಕರ ಜೀವನವನ್ನು ಆರಂಭಿಸಲು ಯುಗಾದಿ ಒಂದು ಉತ್ತಮ ಅವಕಾಶವಾಗಿದೆ.
ಡಾ. ಶಿಲ್ಪಾ. ಮಹದೇವಪ್ಪ. ಬಾಚಲಾಪುರ್ ತಜ್ಞ ವೈದ್ಯರು. ಸರ್ಕಾರಿ ಆಯುರ್ವೇದ ಆಸ್ಪತ್ರೆ ಯಲಬುರ್ಗಾ
