ಕೊಪ್ಪಳ. ಈ ಹಿಂದೆ ಹಲವು ಬಾರಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವಿನ ಪೈಪೋಟಿಯಿಂದ ಗಮನ ಸೆಳೆದಿದ್ದ ಜನಾರ್ದನ ರೆಡ್ಡಿ ಕ್ಷೇತ್ರದ ಅಭ್ಯರ್ಥಿಗಳಿಗೆ ಈ ಬಾರಿ ಹೊಸ ಸವಾಲು ಎದುರಾಗಿದೆ.ಭ ತ್ತದ ಕಣದ ಎಂದೆಂದೂ ಹೆಸರಾದ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರ ಈಗ ಈಡಿ ರಾಜ್ಯದ ಗಮನ ಸೆಳೆದಿದೆ.
ಹಾಲಿ ಶಾಸಕ ಪರಣ್ಣ ಮುನವಳ್ಳಿ ಮೂರನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಈ ಬಾರಿಯೂ ನಾನೇ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ. ಪರಣ್ಣ 2008 ಮತ್ತು 2018ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರು. ಎಚ್.ಆರ್. ಚನ್ನಕೇಶವ ಟಿಕೆಟ್ ಗಿಟ್ಟಿಸಲು ಈ ಸಲ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಶಿಕ್ಷಣ ಕೇಂದ್ರಗಳ ಮೂಲಕ ಹೆಸರು ಮಾಡಿರುವ ನೆಕ್ಕಂಟಿ ಸೂರಿಬಾಬು ಹೆಸರು ಕೂಡ ಚಾಲ್ತಿಯಲ್ಲಿದೆ. ರೆಡ್ಡಿ ಆಗಮನಕ್ಕೂ ಮುನ್ನ ಬಿಜೆಪಿ ಟಿಕೆಟ್ ಪಡೆಯಲು ಇದ್ದಿದ್ದ ವಿರೂಪಾಕ್ಷಪ್ಪ ಸಿಂಗನಾಳ ಬಳಿಕ ಸುಮ್ಮನಾಗಿದ್ದಾರೆ.
ಮೂರು ಬಾರಿ ಜೆಡಿಎಸ್ನಿಂದ ಎರಡು ಬಾರಿ ಶಾಸಕರಾದ ಇಕ್ಬಾಲ್ ಅನ್ಸಾರಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು 7,973 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿಯೂ ಟಿಕೆಟ್ ನೀಡುವಂತೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಲಾಗಿದೆ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಜೆಡಿಎಸ್ ತೊರೆದು ಇತ್ತೀಚೆಗೆ ಪಕ್ಷ ಸೇರಿರುವ ಎಚ್.ಆರ್. ಶ್ರೀನಾಥ್ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ಗಾಗಿ ಈ ಮೂವರ ನಡುವೆ ಪೈಪೋಟಿ ನಡೆಯುತ್ತಿದೆ.
ಗಂಗಾವತಿ ಕ್ಷೇತ್ರ 1957 ರಿಂದ 1978 ರ ಅವಧಿಯಲ್ಲಿ ನಡೆದ ಚುನಾವಣೆ ಹಾಗೂ ಉಪಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿಡಿತ ಸಾಧಿಸಿತ್ತು. 1983ರಲ್ಲಿ ಎಚ್.ಎಸ್. ಮುರಳೀಧರ (ಪಕ್ಷೇತರ) ಮತ್ತು 1985ರಲ್ಲಿ ಜನತಾ ಪಕ್ಷದಿಂದ ಗೌಳಿ ಮಹಾದೇವಪ್ಪ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕಡಿವಾಣ ಹಾಕಿದ್ದರು. 1989 ರಿಂದ 1999 ರ ಅವಧಿಯಲ್ಲಿ ನಡೆದ ಮೂರು ಚುನಾವಣೆಗಳಲ್ಲಿಯೂ ಕಾಂಗ್ರೆಸ್ನಿಂದ ಶ್ರೀರಂಗದೇವರಾಯಲು ಹ್ಯಾಟ್ರಿಕ್ ಗೆಲುವು ಸಾಧಿಸಿ ಪಕ್ಷದ ಕೋಟೆ ಭದ್ರಗೊಳಿಸಿದ್ದರು.
2004 ಹಾಗೂ 2013ರಲ್ಲಿ ಜೆಡಿಎಸ್ ನಿಂದ ಇಕ್ಬಾಲ್ ಅನ್ಸಾರಿ, 2008 ಮತ್ತು 2018ರಲ್ಲಿ ಪರಣ್ಣ ಮನವಳ್ಳಿ ಬಿಜೆಪಿಯಿಂದ ಜಯ ಪಡೆದಿದ್ದರು.
