ಬೆಂಗಳೂರು. ಒಂದು ವಾರದಿಂದ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸದ್ಯಕ್ಕೆ ಮಳೆ ನಿಲ್ಲುವ ಯಾವುದೇ ಸಾಧ್ಯತೆ ಇಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರು ಪರದಾಡುತ್ತಿದ್ದಾರೆ. ಕರಾವಳಿ ಮತ್ತು ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಇನ್ನು ಹವಾಮಾನ ಇಲಾಖೆ ವರದಿ ಪ್ರಕಾರ ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆಯಾಗಲಿದೆ.

ಬೆಂಗಳೂರು: 25-19, ಮಂಗಳೂರು: 27-24, ಚಿಕ್ಕಮಗಳೂರು: 21-18,ದಾವಣಗೆರೆ: 24-21, ಶಿವಮೊಗ್ಗ: 24-21, ಬೆಳಗಾವಿ: 22-20, ಮೈಸೂರು: 25-20, ಕೋಲಾರ: 27-21, ಚಿತ್ರದುರ್ಗ: 24-21, ಹಾವೇರಿ: 24-21, ಕೊಪ್ಪಳ: 25-22, ರಾಯಚೂರು: 26-22, ತುಮಕೂರು: 25-20,ಉಡುಪಿ: 27-24, ಕಾರವಾರ: 27-25, ಮಂಡ್ಯ: 26-21, ಕೊಡಗು: 20-17, ರಾಮನಗರ: 26-21, ಹಾಸನ: 23-19, ಬಳ್ಳಾರಿ: 26-22, ಗದಗ: 24-21, ಯಾದಗಿರಿ: 25-22,
ವಿಜಯಪುರ: 24-21, ಬೀದರ್: 22-20, ಚಾಮರಾಜನಗರ: 26-21, ಚಿಕ್ಕಬಳ್ಳಾಪುರ: 24-18, ಕಲಬುರಗಿ: 24-22, ಬಾಗಲಕೋಟೆ: 24-22.
ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ, ಕಲಬುರಗಿ ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ. ಇನ್ನು ಯಾದಗಿರಿ ಜಿಲ್ಲೆಯಲ್ಲಿ ಸಹ ವರುಣನ ಆರ್ಭಟ ಮುಂದುವರೆದಿದ್ದು, ಶಹಾಪುರ, ಸುರಪುರ, ಸೇರಿ ಹಲವು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಶಹಾಪುರ ಪಟ್ಟಣದಲ್ಲಿ ಬಸವೇಶ್ವರ ವೃತ್ತ ಮತ್ತೆ ಜಲಾವೃತವಾಗಿದ್ದು, ರಸ್ತೆಯಲ್ಲಿ ದ್ವಿಚಕ್ರವಾಹನಗಳು ಸಿಲುಕಿಕೊಂಡಿದ್ದು, ರಸ್ತೆ ದಾಟಲು ಪ್ರಯಾಣಿಕರು ಪರದಾಟ ಮಾಡುತ್ತಿದ್ದಾರೆ.
ಶಾಲೆ – ಕಾಲೇಜುಗಳಿಗೆ ರಜೆ ಘೋಷಣೆ
ಉತ್ತರಕನ್ನಡ ಜಿಲ್ಲೆಯಲ್ಲಿ ಸಹ ಧಾರಾಕಾರ ಮಳೆ ಆಗುತ್ತಿದ್ದು, ಅತೀ ಹೆಚ್ಚು ಮಳೆಯಾಗುತ್ತಿರುವ ತಾಲ್ಲೂಕುಗಳ ಶಾಲೆ, ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಜುಲೈ 9 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶ ನೀಡಿದ್ದು, ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ ತಾಲ್ಲೂಕುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಕರಾವಳಿಯ ಎಲ್ಲಾ ತಾಲ್ಲೂಕುಗಳು, ಘಟ್ಟದ ಮೇಲಿನ 3 ತಾಲ್ಲೂಕುಗಳಿಗೆ ಮಾತ್ರ ರಜೆ ಘೋಷಣೆ ಆಗಿದ್ದು, ಯಲ್ಲಾಪುರ, ಹಳಿಯಾಳ ಹಾಗೂ ದಾಂಡೇಲಿ ತಾಲ್ಲೂಕುಗಳ ಶಾಲೆ, ಕಾಲೇಜಿಗೆ ರಜೆ ಇಲ್ಲ ಎಂದು ತಿಳಿಸಿದ್ದಾರೆ.
