ಸುದ್ದಿಮೂಲ ಸತ್ಯದರ್ಶನ
ಬೆಂಗಳೂರು:ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್ ಅವರು ಭಾನುವಾರ (ಅ.10) ಕೊನೆಯುಸಿರೆಳೆದರು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆ ಮೂಲಕ ಚಿತ್ರರಂಗದಲ್ಲಿ ಅಪಾರ ಅನುಭವ ಪಡೆದುಕೊಂಡಿದ್ದರು. ಚಂದನವನದ ಹಲವಾರು ಸ್ಟಾರ್ ಕಲಾವಿದರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕೈಕೊಟ್ಟಿದ್ದರಿಂದ ಅವರು ನಟನೆಯಿಂದ ದೂರ ಉಳಿಯಬೇಕಾಯಿತು. ಇಹಲೋಕ ತ್ಯಜಿಸಿರುವ ಹಿರಿಯ ನಟನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಸತ್ಯಜಿತ್ ಯಾವುದೇ ಫಿಲ್ಮೀ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಮೂರೂವರೆ ದಶಕಗಳ ಹಿಂದೆ ಅವರು ಹುಬ್ಬಳ್ಳಿಯಲ್ಲಿ ಬಸ್ ಡ್ರೈವರ್ ಆಗಿದ್ದರು. ಕೆಎಸ್ಆರ್ಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗಲೇ ಅವರಿಗೆ ನಟನೆ ಬಗ್ಗೆ ಅಪಾರ ಪ್ರೀತಿ ಇತ್ತು. ಹಾಗಾಗಿ ಹವ್ಯಾಸಿ ನಾಟಕ ತಂಡಗಳ ಜೊತೆ ಗುರುತಿಸಿಕೊಂಡಿದ್ದರು. ಅನೇಕ ಊರುಗಳಿಗೆ ತೆರಳಿ ಹಲವು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಆ ಮೂಲಕ ಅವರಿಗೆ ಬಣ್ಣದ ಸಹವಾಸ ಅಂಟಿಕೊಂಡಿತು. ಅದು ಅವರನ್ನು ಬಾಲಿವುಡ್ವರೆಗೆ ಕರೆದುಕೊಂಡು ಹೋಯಿತು ಎಂಬುದೇ ಅಚ್ಚರಿ.
ಸತ್ಯಜಿತ್ ಅವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. ಆದರೆ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರು ಹೆಸರು ಬದಲಾಯಿಸಿಕೊಂಡರು. ಸತ್ಯಜಿತ್ ಎಂಬ ಹೆಸರಿನಿಂದಲೇ ಅವರು ಫೇಮಸ್ ಆದರು. ಗಡಿಬಿಡಿ ಗಂಡ, ಮನೆ ದೇವ್ರು, ಶಿವಮೆಚ್ಚಿದ ಕಣ್ಣಪ್ಪ, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಅಪ್ಪು, ಅಭಿ, ಆಪ್ತಮಿತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅವರು ಕನ್ನಡ ಸಿನಿಪ್ರಿಯರನ್ನು ರಂಜಿಸಿದ್ದರು.
ಸತ್ಯಜಿತ್ ಅವರು ಕೊನೆಯದಾಗಿ ನಟಿಸಿದ್ದು ‘ಸೆಕೆಂಡ್ ಹಾಫ್’ ಚಿತ್ರದಲ್ಲಿ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಸಿನಿಮಾ 2018ರಲ್ಲಿ ತೆರೆ ಕಂಡಿತು. ಒಂದು ಕಾಲು ಕಳೆದುಕೊಂಡಿದ್ದ ಅವರು ವ್ಹೀಲ್ ಚೇರ್ ಮೇಲೆ ಕುಳಿತುಕೊಂಡೇ ನಟಿಸಿದ್ದರು.
