ಗದಗ : ಜುಲೈ 14: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತನಿಖಾ ತಂಡಗಳು ಜನೆವರಿಯಿಂದ ಜೂನ್ ವರೆಗಿನ ಅವಧಿಯಲ್ಲಿ ಸಾರಿಗೆ ಬಸ್ಸುಗಳಲ್ಲಿ 21,034 ಟಿಕೆಟ್ ರಹಿತ ಪ್ರಯಾಣಿಕರಿಂದ ರೂ.20.19 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ವಾಕರಸಾ.ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿಗಳ ಪ್ರಗತಿ ಪರಿಶೀಲನೆ ಮಾಡಿದ ನಂತರ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಹುದ್ದಾರ ಮಾತನಾಡಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವುದು ಹಾಗೂ ಚಾಲನಾ ಸಿಬ್ಬಂದಿಗಳಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ತನಿಖಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ತನಿಖಾಧಿಕಾರಿಗಳು ಸಾರಿಗೆ ಆದಾಯ ಸೋರಿಕೆ ತಡೆಗಟ್ಟಲು ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಉತ್ತಮ ಗುಣಮಟ್ಟದ ಪ್ರಕರಣಗಳನ್ನು ಪತ್ತೆ ಮಾಡಬೇಕು ಎಂದು ತಿಳಿಸಿದರು.
ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಎಚ್.ರಾಮನಗೌಡರ ಮಾತನಾಡಿ ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳೆಯರು ಸೇರಿದಂತೆ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನಿಗಧಿತ ನಿಲುಗಡೆಗಳಲ್ಲಿ ಕಡ್ಡಾಯವಾಗಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಹೋಗುವಂತೆ, ಪ್ರಯಾಣಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸುವಂತೆ ಹಾಗೂ ಸುರಕ್ಷಿತ ಕ್ರಮಗಳ ಪಾಲನೆಯ ಬಗ್ಗೆ ಚಾಲನಾ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಉತ್ತಮ ಸಾಧನೆ ಮಾಡಿದ ತನಿಖಾ ಸಿಬ್ಬಂದಿಗಳಾದ ಬಸವಂತಪ್ಪ ತಳ್ಳಳ್ಳಿ, ಈಶಪ್ಪ ಪಟ್ಟಣಶೆಟ್ಟಿ, ಭೀಮಪ್ಪ ದಾನಪ್ಪಗೋಳ, ಅಮರನಾಥ ಕುಂಟೋಜಿ, ರಾಜೇಶ ಮನಸೂರ ಹಾಗೂ ಗೋವಿಂದ ಲಮಾಣಿ ಹಾಗೂ ಚಾಲಕರುಗಳಾದ ಹುಸೇನ್ಸಾಬ್ ಮುಲ್ಲಾನವರ ಮತ್ತು ಅಶೋಕ ಶಿವಶರಣ ಅವರಿಗೆ ನಗದು ಪುರಸ್ಕಾರ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ವಾಕರಸಾ.ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳ 9 ಸಾರಿಗೆ ವಿಭಾಗಗಳು ಹಾಗೂ ಕೇಂದ್ರ ಕಚೇರಿಯ ತನಿಖಾ ಸಿಬ್ಬಂದಿಗಳು ಜನೆವರಿಯಿಂದ ಜೂನ್ ಅವಧಿಯಲ್ಲಿ 1,00,778 ತನಿಖೆಗಳನ್ನು ಮಾಡಿದ್ದು, 21,034 ಟಿಕೆಟ್ ಟಿಕೆಟ್ ರಹಿತ ಪ್ರಯಾಣಿಕರಿಂದ ರೂ.20,19,459 ದಂಡ ವಸೂಲು ಮಾಡಲಾಗಿದೆ.
ಮಹಿಳೆಯರಿಗೆ ಬಸ್ಸುಗಳಲ್ಲಿ ಪ್ರಯಾಣ ಉಚಿತವಾಗಿದೆ, ಆದರೆ ಟಿಕೆಟ್ ಪಡೆಯುವುದು ಕಡ್ಡಾಯವಾಗಿರುತ್ತದೆ. ಇಲ್ಲದಿದ್ದರೆ ಸ್ಥಳದಲ್ಲಿಯೆ ದಂಡ ನೀಡಬೇಕಾಗುತ್ತದೆ. ಪ್ರತಿಯೊಬ್ಬರೂ ತಪ್ಪದೇ ಪ್ರಯಾಣದ ಅಧಿಕೃತ ಟಿಕೆಟ್ ಪಡೆದು ಪ್ರಯಾಣ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
