ಗದಗ:( ಸತ್ಯದರ್ಶನ) ಸೆ. 8: ಗದಗ ಜಿಲ್ಲೆಯಲ್ಲಿ ಅತೀವೃಷ್ಠಿಯಿಂದಾದ ಹಾನಿ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡ ಗುರುವಾರ ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಜಲಶಕ್ತಿ ಮಂತ್ರಾಲಯದ ಅಶೋಕ ಕುಮಾರ, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ ವಿ.ವಿ.ಶಾಸ್ತ್ರಿ, ಅತೀವೃಷ್ಠಿ ಹಾನಿ ಅಧ್ಯಯನ ತಂಡದ ಸದಸ್ಯರಾಗಿ ಆಗಮಿಸಿ ಹಾನಿ ಪ್ರದೇಶಗಳ ವೀಕ್ಷಣೆ ನಡೆಸಿದರು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ಅವರು ಸಹ ತಂಡದೊಂದಿಗೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು.
ತಂಡವು ಹೊಂಬಳದ ಹೊರವಲಯದಲ್ಲಿನ ಅಣ್ಣಪ್ಪ ಕಬ್ಬಿಣದ ಅವರ ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಶೇಂಗಾ ಕೃಷಿ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ರೈತರೊಂದಿಗೆ ಮಾತನಾಡಿದ ಅವರು ಅತಿಯಾದ ಮಳೆಯಿಂದಾಗಿ ಹಾನಿಯಾದ ಮನೆ, ಬೆಳೆ, ರಸ್ತೆ ಹಾನಿ ಕುರಿತು ಈಗಾಗಲೆ ಜಿಲ್ಲಾಡಳಿತ ವರದಿ ಸಲ್ಲಿಸಿದೆ.
ಕಳೆದ ಎರಡು-ಮೂರು ದಿನಗಳಲ್ಲಿ ಆದ ಅತೀಯಾದ ಮಳೆಯಿಂದ ಮತ್ತಷ್ಟು ಹಾನಿ ಸಂಭವಿಸಿದ್ದು ಹಾನಿಯ ಸಮೀಕ್ಷೆ ನಡೆಸಿ ಜಿಲ್ಲಾಡಳಿತ ಮತ್ತೆ ವರದಿ ಸಲ್ಲಿಸಲಿದೆ. ಹಾನಿ ಅಧ್ಯಯನದ ವರದಿಯನ್ನು ಮುಂದಿನ ಹತ್ತು ದಿನಗೊಳಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವದು ಎಂದು ರೈತರಿಗೆ ತಿಳಿಸಿದರು.
ತದನಂತರ ಅತೀಯಾದ ಮಳೆಯಿಂದಾಗಿ ಹಾನಿಗೊಳಗಾದ ಹೊಂಬಳ-ಹಿರೇಹಂದಿಗೋಳ ಸಂಪರ್ಕ ರಸ್ತೆ ಹಾಗೂ ಬೆಳೆ ಹಾನಿ ವೀಕ್ಷಿಸಿದರು.
ಗದಗ ನಗರದ ಬಸವೇಶ್ವರ ವೃತ್ತದಲ್ಲಿ ಅಂಗಡಿ, ಮನೆಗಳಿಗೆ ಮಳೆ ನೀರು ನುಗ್ಗಿದರ ಕುರಿತು ವೀಕ್ಷಿಸಿದರು. ಕಳಸಾಪುರ, ನಾಗಾವಿ, ಮಾಗಡಿ ಹಾಗೂ ಶೆಟ್ಟಿಕೇರಿಯಲ್ಲಿ ಮಳೆಯಿಂದಾಗಿ ಹಾನಿಗಿಡಾದ ರಸ್ತೆ, ನಾಗವಿಯಲ್ಲಿ ಕೃಷಿ, ತೋಟಗಾರಿಕೆ ಬೆಳೆ, ರಸ್ತೆ, ಶಾಲೆ, ಅಂಗನವಾಡಿ ಕಟ್ಟಡ ಮತ್ತು ಮನೆ ಹಾನಿ ಪರಿಶೀಲಿಸಿದರು.
ಗೊಜನೂರ-ಯತ್ನಳ್ಳಿ ಮಾರ್ಗ ಮಧ್ಯೆ ಬೆಳೆ ಹಾಗೂ ಸೇತುವೆ ಹಾನಿಗೊಳಗಾದ ಬಗ್ಗೆ ವೀಕ್ಷಿಸಿದರು..
ಲಕ್ಷ್ಮೇಶ್ವರದಲ್ಲಿ ರಸ್ತೆ ದುರಸ್ತಿ, ಶಾಲಾ ಕಟ್ಟಡ ಹಾನಿ ಕುರಿತು ಪರೀಶಿಲನೆ ಕೈಗೊಂಡರು. ಈ ವೇಳೆ ಸ್ಥಳೀಯ ಅಧಿಕಾರಿಗಳು, ಸಂಬಂಧಿತ ಇಲಾಖಾ ಅಧಿಕಾರಿಗಳು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ ಅವರು ಜಿಲ್ಲೆಯಲ್ಲಾದ ಅತೀವೃಷ್ಠಿ ಹಾನಿ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಗೆ ಮಾಡಿಕೊಟ್ಟರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ತಹಶೀಲ್ದಾರ ಕಿಶನ್ ಕಲಾಲ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಕೃಷಿ ಇಲಾಖೆ ಉಪನಿರ್ದೇಶಕ ಕರಿಯಲ್ಲಪ್ಪ ಕೊರಚರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.