ಬೆಂಗಳೂರು : ರಾಜ್ಯದಲ್ಲಿ ಅಪೌಷ್ಟಿಕತೆಗೆ ಪ್ರಮುಖ ಕಾರಣಗಳೇನು, ಇದರಲ್ಲಿ ಭೌಗೋಳಿಕತೆ, ಆರೋಗ್ಯ, ಅನುವಂಶೀಯತೆಯ ಪಾತ್ರ ಎಷ್ಟಿದೆ, ಯಾವ ಜಿಲ್ಲೆ, ಯಾವ ತಾಲೂಕುಗಳಲ್ಲಿ ಅಪೌಷ್ಟಿಕತೆ ಸಮಸ್ಯೆ ಹೇಗಿದೆ ಎಂಬ ಬಗ್ಗೆ ಇಡೀ ರಾಜ್ಯದ ಸ್ಪಷ್ಟ ಚಿತ್ರಣ ಸಿಗಲಿದೆ.
ಅದರ ಆಧಾರದಲ್ಲಿ ಅಪೌಷ್ಟಿಕತೆ ನಿವಾ ರಣೆಗೆ ಸಮಗ್ರ ಯೋಜನೆ ರೂಪಿಸಲು ಸಾಧ್ಯವಾಗಲಿದೆ. ರಾಷ್ಟ್ರೀಯ ಸಮೀಕ್ಷೆ ಮಾದರಿಯಲ್ಲಿ ರಾಜ್ಯ ಮಟ್ಟದ ಪೌಷ್ಟಿಕತಾ ಸಮೀಕ್ಷೆ ನಡೆಸುವ ಬಗ್ಗೆ 2022-23ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯೋನ್ಮುಖವಾಗಿದ್ದು, ಪೌಷ್ಟಿಕತಾ ಸಮೀಕ್ಷೆ ಬಗ್ಗೆ ಪ್ರಾಥಮಿಕ ಹಂತದ ಸಭೆ, ಸಮಾಲೋಚನೆಗಳನ್ನು ಆರಂಭಿಸಿದೆ.
ರಾಜ್ಯವನ್ನು ಅದರಲ್ಲೂ ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳನ್ನು ಶಾಪವಾಗಿ ಕಾಡುತ್ತಿರುವ ಅಪೌಷ್ಟಿಕ ಸಮಸ್ಯೆಯನ್ನು ಬುಡಸಮೇತ ಕಿತ್ತು ಹಾಕಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಅಪೌಷ್ಟಿಕತೆಗೆ ಮುಖ್ಯ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಲು ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ಮಾದರಿಯಲ್ಲಿ “ರಾಜ್ಯ ಮಟ್ಟದ ಪೌಷ್ಟಿಕತಾ ಸಮೀಕ್ಷೆ’ ಕೈಗೊಳ್ಳಲು ಯೋಜನೆ ಹಾಕಿಕೊಂಡಿದೆ.
ಸಮೀಕ್ಷೆ ಕುರಿತು ಪರಿಕಲ್ಪನಾ ಕರಡು ಸಿದ್ಧವಾಗಿದ್ದು, ರಾಷ್ಟ್ರಮಟ್ಟದ ಸಮೀಕ್ಷಾ ಸಂಸ್ಥೆಗಳಿಗೆ ಈ ಕರಡು ಸಲ್ಲಿಸಿ ಅಭಿಪ್ರಾಯ ಪಡೆದುಕೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
